ಹರಿದ್ವಾರ (ಐಎಎನ್ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಬಾಬಾ ರಾಮ್ದೇವ್ ಅವರು ಟೀಕಿಸಿದ್ದಾರೆ.
ಆಶ್ರಮದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ವೈಯಕ್ತಿಕವಾಗಿ ಪ್ರಧಾನಿ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ, ಆದರೆ ಅವರು ಕರ್ತವ್ಯ ನಿರ್ವಹಿಸುವಲ್ಲಿ ಎಡವಿದ್ದಾರೆ ಎಂದು ಆರೋಪಿಸಿದರು.
ಶನಿವಾರ ಮಧ್ಯರಾತ್ರಿಯ ನಂತರ ರಾಮಲೀಲಾ ಮೈದಾನದಲ್ಲಿ ನಡೆದ ಘಟನೆಗಳ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸ್ವಪ್ರೇರಣೆಯಿಂದ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್ಗೆ ಧನ್ಯವಾದ ಹೇಳಿದ ಬಾಬಾ ಅವರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ,ರಾಷ್ಟ್ರೀಯ ಮಹಿಳಾ ಆಯೋಗ ಸಹ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ತಮ್ಮ ಬೆಂಬಲಿಗರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಿದ್ದಾರೆ ಎಂದು ಹೇಳಿದರು.
ವೈರಿಗಳಿಗೆ ಚೆಳ್ಳೆಹಣ್ಣು ತಿನ್ನಿಸಲು ಶಿವಾಜಿ ಮಹಾರಾಜ್ ಸಹ ವಿವಿಧ ಉಪಾಯಗಳನ್ನು ಮಾಡುತ್ತಿದ್ದ. ತಾವು ಸಹ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಹಿಳಾ ದಿರಿಸು ದರಿಸಿದ್ದಾಗಿ ಅವರು ತಮ್ಮ ಕ್ರಮ ಸಮರ್ಥಿಸಿಕೊಂಡರು.