ಬೆಂಗಳೂರು: ಮಂಗಳೂರಿನಲ್ಲಿರುವ `ಮಾರ್ನಿಂಗ್ಮಿಸ್ಟ್~ ಹೋಂ ಸ್ಟೇ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಆಗಸ್ಟ್ 4 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ಗುರುವಾರ ಮಾಹಿತಿ ನೀಡಿದ ವೇದಿಕೆಯ ಅಧ್ಯಕ್ಷ ಕೆ.ಎಲ್.ಅಶೋಕ, `ದಾಳಿಯನ್ನು ಸಂಪೂರ್ಣವಾಗಿ ಚಿತ್ರೀಕರಿಸುವ ಮೂಲಕ ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುವ ಪುಂಡರ ಕಾಮುಕತನವನ್ನು ಜನರಿಗೆ ತಿಳಿಸಿದ ಪತ್ರಕರ್ತರ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು, ವೃತ್ತಿಧರ್ಮವನ್ನು ಪಾಲಿಸಿದ ವರದಿಗಾರರ ಮೇಲಿರುವ ಮೊಕದ್ದಮೆಯನ್ನ ಕೂಡಲೇ ಹಿಂಪಡೆಯಬೇಕು~ ಎಂದು ಆಗ್ರಹಿಸಿದರು.
ವೇದಿಕೆಯ ಎ.ಕೆ.ಸುಬ್ಬಯ್ಯ, ಸಾಹಿತಿ ಬಿ.ಟಿ.ಲಲಿತಾನಾಯಕ್ ವೇದಿಕೆಯ ಫಕೀರ್ ಮಹಮ್ಮದ್ ಕಟ್ಟಾಡಿ, ಎನ್.ವೆಂಕಟೇಶ್, ದಿನಕರ ಎಸ್.ಬೇಂಗ್ರೆ, ಸರ್ದಾರ್ ಅಹ್ಮದ್ ಖುರೇಷಿ ಇತರರು ಉಪಸ್ಥಿತರಿದ್ದರು.