ಬೆಂಗಳೂರು: ಕೊನೆಯ ಪಂದ್ಯದಲ್ಲೂ ಚುರುಕಿನ ಪ್ರದರ್ಶನ ನೀಡಿದ ಕರ್ನಾಟಕ ತಂಡದವರು ಇಲ್ಲಿ ಮುಕ್ತಾಯಗೊಂಡ ಅಖಿಲ ಭಾರತ 25ನೇ ಪೋಸ್ಟಲ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ 5-1ಗೋಲುಗಳಿಂದ ಮಧ್ಯ ಪ್ರದೇಶ ತಂಡವನ್ನು ಮಣಿಸಿತು.
ಆತಿಥೇಯ ತಂಡದ ಸ್ಯಾಮುಯಲ್ ನಿರಂಜನ್ 5ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಇದೇ ಆಟಗಾರ 35ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿಟ್ಟರು. ಇದಕ್ಕೆ ತಕ್ಕ ಸಾಥ್ ನೀಡಿದ ತಾರಾನಾಥ್ 16ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇನ್ನೆರೆಡು ಗೋಲುಗಳನ್ನು ಸಿ. ಪ್ರಕಾಶ್ 20 ಮತ್ತು 27ನೇ ನಿಮಿಷದಲ್ಲಿ ಗಳಿಸಿದರು. ಪಂದ್ಯದ ಪ್ರಥಮಾರ್ಧದ ವೇಳೆಗೆ ಕರ್ನಾಟಕ 5-0ರಲ್ಲಿ ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿ ಮಧ್ಯ ಪ್ರದೇಶದ ಸಿರಾಜ್ ಉಲ್ ಹಕ್ 42ನೇ ನಿಮಿಷದಲ್ಲಿ ಗೋಲು ಗಳಿಸಿ ಮರು ಹೋರಾಟದ ಸೂಚನೆ ನೀಡಿದರು. ಆದರೆ, ಸಾಧ್ಯವಾಗಲಿಲ್ಲ. ಸೆಮಿಫೈನಲ್ನಲ್ಲಿ ಆತಿಥೇಯರು ಪಂಜಾಬ್ ಎದುರು ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು.
ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ತಮಿಳುನಾಡು 2-1ಗೋಲುಗಳಿಂದ ಪಂಜಾಬ್ ತಂಡವನ್ನು ಸೋಲಿಸಿತು.
ವಿಜಯಿ ತಂಡದ ಪ್ರೇಮ್ ಕುಮಾರ್ (2ನೇ ನಿಮಿಷ), ಜವಾಹರ್ (21ನೇ ನಿ.) ಚೆಂಡನ್ನು ಪೆಟ್ಟಿಗೆ ಸೇರಿಸಿದರು. ಪಂಜಾಬ್ ತಂಡದ ಏಕೈಕ ಗೋಲನ್ನು ಧರ್ಮಪಾಲ್ ಆರನೇ ನಿಮಿಷದಲ್ಲಿ ತಂದಿತ್ತರು.