ವಾಸ್ಕೊ ಡ ಗಾಮ, ಗೋವಾ (ಪಿಟಿಐ): ಮನೀಷ್ ಪಾಂಡೆ (81, 92 ಎಸೆತ, 7 ಬೌಂ, 1 ಸಿಕ್ಸರ್) ಮತ್ತು ಕರುಣ್ ನಾಯರ್ (64, 51 ಎಸೆತ, 4 ಬೌಂ, 3 ಸಿಕ್ಸರ್) ಗಳಿಸಿದ ಅಜೇಯ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಜಯ ಸಾಧಿಸಿತು.
ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ ಬಳಗ ಏಳು ವಿಕೆಟ್ಗಳಿಂದ ತಮಿಳುನಾಡು ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ತಮಿಳುನಾಡು ನಿಗದಿತ ಓವರ್ಗಳಲ್ಲಿ 8 ವಿಕೆಟ್ಗೆ 250 ರನ್ ಪೇರಿಸಿದರೆ, ಕರ್ನಾಟಕ 45.2 ಓವರ್ಗಳಲ್ಲಿ 3 ವಿಕೆಟ್ಗೆ 252 ರನ್ ಗಳಿಸಿ ಜಯ ಸಾಧಿಸಿತು.
ಉತ್ತಮ ಫಾರ್ಮ್ನಲ್ಲಿರುವ ರಾಬಿನ್ ಉತ್ತಪ್ಪ (49, 45 ಎಸೆತ, 7 ಬೌಂ, 2 ಸಿಕ್ಸರ್) ಮತ್ತು ಕೆ.ಎಲ್. ರಾಹುಲ್ (20) ಮೊದಲ ವಿಕೆಟ್ಗೆ 48 ರನ್ ಸೇರಿಸಿದರು. ಗಣೇಶ್ ಸತೀಶ್ 35 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಮುರಿಯದ ನಾಲ್ಕನೇ ವಿಕೆಟ್ಗೆ 123 ರನ್ಗಳನ್ನು ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಇದಕ್ಕೂ ಮುನ್ನ ಅಭಿಮನ್ಯು ಮಿಥುನ್ (49ಕ್ಕೆ 3) ಒಳಗೊಂಡಂತೆ ಕರ್ನಾಟಕದ ಮಧ್ಯಮ ವೇಗದ ಬೌಲರ್ಗಳು ಸಮರ್ಥ ದಾಳಿಯ ಮೂಲಕ ತಮಿಳುನಾಡು ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ್ದರು. ದಿನೇಶ್ ಕಾರ್ತಿಕ್ (84, 87 ಎಸೆತ, 4 ಬೌಂ, 3 ಸಿಕ್ಸರ್) ಮತ್ತು ವಿಜಯ್ ಶಂಕರ್ (59) ಮಾತ್ರ ಉತ್ತಮ ಪ್ರದರ್ಶನ ನೀಡಿದರು.
ಸಂಕ್ಷಿಪ್ತ ಸ್ಕೋರ್: ತಮಿಳುನಾಡು: 50 ಓವರ್ಗಳಲ್ಲಿ 8 ವಿಕೆಟ್ಗೆ 250 (ಅಭಿನವ್ ಮುಕುಂದ್ 39, ದಿನೇಶ್ ಕಾರ್ತಿಕ್ 84, ವಿಜಯ್ ಶಂಕರ್ 59, ಅಭಿಮನ್ಯು ಮಿಥುನ್ 49ಕ್ಕೆ 3, ಎಚ್.ಎಸ್. ಶರತ್ 45ಕ್ಕೆ 2, ಸ್ಟುವರ್ಟ್ ಬಿನ್ನಿ 56ಕ್ಕೆ 2) ಕರ್ನಾಟಕ: 45.2 ಓವರ್ಗಳಲ್ಲಿ 3 ವಿಕೆಟ್ಗೆ 252 (ಕೆ.ಎಲ್. ರಾಹುಲ್ 20, ರಾಬಿನ್ ಉತ್ತಪ್ಪ 49, ಗಣೇಶ್ ಸತೀಶ್ 35, ಮನೀಷ್ ಪಾಂಡೆ ಔಟಾಗದೆ 81, ಕರುಣ್ ನಾಯರ್ 64, ರಾಹಿಲ್ ಶಾ 52ಕ್ಕೆ 1, ಬಾಬಾ ಅಪರಾಜಿತ್ 43ಕ್ಕೆ 1) ಫಲಿತಾಂಶ: ಕರ್ನಾಟಕಕ್ಕೆ ಏಳು ವಿಕೆಟ್ ಗೆಲುವು ಹಾಗೂ ನಾಲ್ಕು ಪಾಯಿಂಟ್