ಆಲಮಟ್ಟಿ: ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಸುಕ್ಷೇತ್ರ ಯಲಗೂರಿನಲ್ಲಿ ಕಲುಷಿತ ನೀರು ಸೇವನೆಯಿಂದ 100 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ತುರ್ತು ಚಿಕಿತ್ಸೆಗಾಗಿ ಅವರನ್ನು ಆಲಮಟ್ಟಿ ಸುತ್ತಮುತ್ತಲಿನ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ದೀಪಾವಳಿ ಅಮಾವ್ಯಾಸೆಯಿಂದ ಪ್ರಾರಂಭಗೊಂಡ ಈ ಕಾಯಿಲೆ ಪ್ರತಿನಿತ್ಯವೂ ಉಲ್ಬಣಿಸುತ್ತಿದೆ. ಯಲಗೂರ ಗ್ರಾಮಕ್ಕೆ ನೀರು ಶುದ್ಧಿಕರಣಗೊಳ್ಳದೇ ನೇರವಾಗಿ ಪೂರೈಕೆಯಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಅದರಲ್ಲಿಯೂ ಯಲಗೂರ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 13 ರ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿದ್ದು ಅದರಿಂದಲೂ ನೀರು ಕಲುಷಿತಗೊಳ್ಳುತ್ತಿದೆ.
ಯಲಗೂರಕ್ಕೆ ನೀರು ಪೂರೈಕೆಯಾಗುವ ಜಾಕವೆಲ್ ಅಲ್ಲಿಯೇ ಇದೆ. ಅದರಿಂದಾಗಿ ಆ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲಸಂಗಮದಲ್ಲೂ ಕೃಷ್ಣೆ ನೀರು ಸೇವಿಸಿ ಜನರು ಅಸ್ವಸ್ಥಗೊಂಡಿದ್ದಾರೆ.
ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಗ್ರಾಮದ ಪರಿಸ್ಥಿತಿಯನ್ನು ವಿವರಿಸಿದರು. ಇದಕ್ಕೂ ಮೊದಲು ಅವರು ಶುಕ್ರವಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಲಕ್ಕಣ್ಣವರ ಅವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ವಾಂತಿ ಭೇದಿಗೆ ಕಾರಣ ಏನು ಎಂದು ಪರಿಶೀಲಿಸಿದರು.