ಬೆಂಗಳೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಕೊರತೆ ಮುಂದುವರಿದಿದ್ದು, ಅಗತ್ಯವಿರುವಷ್ಟು ಕಲ್ಲಿದ್ದಲು ಲಭ್ಯವಿಲ್ಲದ ಕಾರಣ ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.
ಆರ್ಟಿಪಿಎಸ್ನ ಐದು ಮತ್ತು ಎಂಟನೇ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಆರು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಶುಕ್ರವಾರ ಸುಮಾರು 1100 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಿದೆ.
ಕೇವಲ 12 ಸಾವಿರ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ವಿದ್ಯುತ್ ಉತ್ಪಾದನೆಗೆ ನಿತ್ಯ ಪೂರೈಕೆಯಾಗುವ ಕಲ್ಲಿದ್ದಲಿನ ಮೇಲೆ ಅವಲಂಬಿಸುವಂತಾಗಿದೆ.
ಎಲ್ಲ ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸುವಷ್ಟು ಕಲ್ಲಿದ್ದಲು ಇಲ್ಲದ ಕಾರಣ ಸುಮಾರು ಒಂದು ತಿಂಗಳಿಂದ 8ನೇ ಘಟಕ ಸ್ಥಗಿತಗೊಳಿಸಲಾಗಿದೆ.
ಇನ್ನುಳಿದಂತೆ ಸರದಿ ಪ್ರಕಾರ ಒಂದೊಂದು ಘಟಕವನ್ನು ಸ್ಥಗಿತಗೊಳಿಸಲಾಗುತ್ತಿದೆ.
ತಾಂತ್ರಿಕ ಕಾರಣಗಳಿಂದಾಗಿ ಕೆಲವೊಮ್ಮೆ ಘಟಕಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಆದರೆ ಅಲ್ಲಿನ ವಾಸ್ತವ ಸ್ಥಿತಿಯೇ ಬೇರೆಯಾಗಿದ್ದು, ಕಲ್ಲಿದ್ದಲು ಕೊರತೆಯೇ ಘಟಕಗಳ ಸ್ಥಗಿತಕ್ಕೆ ಕಾರಣ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.