ಬೆಂಗಳೂರು: ‘ಪಟ್ಟಭದ್ರ ಹಿತಾಸಕ್ತಿಗಳು ನಗರದ ತ್ಯಾಜ್ಯ ವಿಲೇವಾರಿ ಗುತ್ತಿಗೆ ತೆಗೆದುಕೊಂಡಂತಿದೆ. ಅವರನ್ನು ನಿಯಂತ್ರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಅಸಹಾಯಕರಾಗಿದ್ದಾ ರೆಯೇ? ಅಥವಾ ಗುತ್ತಿಗೆದಾರರೇ ಆಯುಕ್ತರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾ ರೆಯೇ?’ ಎಂದು ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿತು.
ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ರೀತಿ ಪ್ರಶ್ನಿಸಿತು.
‘ತ್ಯಾಜ್ಯ ವಿಲೇವಾರಿ ಗುತ್ತಿಗೆ ವಹಿಸಿಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊರಹಾಕಿದರೆ, ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸಾರ್ವಜನಿಕರ ಹಿತ ಕಾಯುವ ಇರಾದೆ ಪಾಲಿಕೆಗೆ ಇದ್ದರೆ, ಮೊದಲು ಈ ಕೆಲಸ ಮಾಡಲಿ’ ಎಂದು ಪೀಠ, ಮೌಖಿಕ ವಾಗಿ ತಾಕೀತು ಮಾಡಿತು.
ಎಲ್ಲೆಂದರಲ್ಲಿ ಕಸ ಬಿಸಾಡಿದವರಿಂದ ದಂಡ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ರೂ 1.98 ಲಕ್ಷ ಸಂಗ್ರಹ ಆಗಿದೆ ಎಂದು ಬಿಬಿಎಂಪಿ ಪರ ವಕೀಲರು ಪೀಠಕ್ಕೆ ತಿಳಿಸಿದರು. ಅರ್ಜಿಯ ವಿಚಾರಣೆ ಮುಂದೂಡ ಲಾಗಿದೆ.