ಬೆಂಗಳೂರು: `ಕಸ ವಿಂಗಡಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದೆ. ಆದರೆ, ಅವರಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ~ ಎಂದು ಶಾಸಕ ಬಿ.ಎನ್. ವಿಜಯಕುಮಾರ್ ಹೇಳಿದರು.ಬಿಬಿಎಂಪಿ ವತಿಯಿಂದ ಜಯನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಜನರಲ್ಲಿ ಅರಿವು ಮೂಡಿಸಲು ಈ ರೀತಿಯ ಜಾಥಾ ಕಾರ್ಯಕ್ರಮಗಳು ಅನುಕೂಲವಾಗಲಿವೆ. ಜಯನಗರದಲ್ಲಿ ಶೇ 35 ರಷ್ಟು ಜನ ಕಸ ವಿಂಗಡಣೆಯನ್ನು ಮಾಡುತ್ತಿದ್ದಾರೆ. ಉಳಿದವರು ಸಹ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು~ ಎಂದರು.
ಪಾಲಿಕೆ ಸದಸ್ಯ ಎನ್. ನಾಗರಾಜು ಮಾತನಾಡಿ, `ಪಾಲಿಕೆ ವ್ಯಾಪ್ತಿಯಲ್ಲಿ ಅ. 1 ರಿಂದ ಮನೆಯಲ್ಲಿಯೇ ಕಸ ವಿಂಗಡಿಸುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಆದರೂ, ಇದು ಒಂದೇ ದಿನದಲ್ಲಿ ಸಫಲತೆ ಕಾಣುವುದಿಲ್ಲ. ಹಂತ-ಹಂತಗಳಲ್ಲಿ ಈ ಯೋಜನೆಯು ಯಶಸ್ವಿಯಾಗಲಿದೆ~ ಎಂದು ಹೇಳಿದರು.
`ಹಸಿ ಮತ್ತು ಒಣ ತ್ಯಾಜ್ಯದ ಬೇರ್ಪಡಿಕೆಗೆ ಅನುಕೂಲವಾಗುವಂತೆ ಬೈರಸಂದ್ರ ವಾರ್ಡ್ನ ಎಲ್ಲಾ ನಿವಾಸಿಗಳಿಗೆ ಕಸದ ಬುಟ್ಟಿಗಳನ್ನು ವಿತರಣೆ ಮಾಡಲಾಗುವುದು~ ಎಂದರು.ಜಾಥಾದಲ್ಲಿ ಪಾಲಿಕೆಯ ದಕ್ಷಿಣ ವಲಯದ ಹೆಚ್ಚುವರಿ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಮತ್ತಿತರರು ಭಾಗವಹಿಸಿದ್ದರು.