ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಕಸಾಪ ಸದಸ್ಯರಿಗೆ ತಿಳಿಸುವ ಉದ್ದೇಶದಿಂದ ದ್ವೈಮಾಸಿಕ ಪತ್ರಿಕೆಯನ್ನು ಹೊರ ತರಲಾಗುವುದೆಂದು ಪರಿಷತ್ತಿನ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ಕಸಾಪ ಮಂಡ್ಯ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಭಾನುವಾರ ನಗರದಲ್ಲಿ ಕರೆದಿದ್ದ ಕಸಾಪ ಅಜೀವ ಸದಸ್ಯರ ಸಮಾ ಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಜೂ. 7ರಂದು ಪತ್ರಿಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಕುರಿತಂತೆ, ಅಂತರ ರಾಷ್ಟ್ರೀಯ ಸಮ್ಮೇಳನವನ್ನು ನಗರದಲ್ಲಿ ಈ ವರ್ಷದ ಅಂತ್ಯಕ್ಕೆ ನಡೆಸಲು ಉದ್ದೇಶಿಸಲಾಗಿದೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಗರದಲ್ಲಿ ಕಸಾಪ ಮಂಡ್ಯ ತಾಲ್ಲೂಕು ಘಟಕದ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದೆ ಎಂದರು.
ಕನ್ನಡ ಭಾಷೆ ಅಭಿವೃದ್ಧಿ ಪಡಿಸಲು ಶಾಲಾ ಹಂತದಲ್ಲಿ ಕನ್ನಡಕ್ಕೆ ಸಂಬಂಧಿಸಿ ದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚಿದ ಆಕಾಂಕ್ಷಿಗಳ ಸಂಖ್ಯೆ: ಕಸಾಪ ಘಟಕಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಹಲವು ಸದಸ್ಯರು ತಮ್ಮ ಮುಂದಿನ ಯೋಜನೆಗಳು, ಈ ಹಿಂದೆ ದುಡಿದ ಕ್ಷೇತ್ರಗಳ ಬಗೆಗೆ ಅಭಿಪ್ರಾಯ ಗಳನ್ನು ಮಂಡಿಸಿದರು.
ಸಿ.ಕೆ.ರವಿಕುಮಾರ್, ಕಾಳೇನಹಳ್ಳಿ ಮಹದೇವು, ಕೆ.ಎಂ.ಶಂಕರೇಗೌಡ, ಯೋಗಾನಂದ ಡಿ.ಎ.ಕೆರೆ, ಮಂಗಳಾ ರೇವಣ್ಣ ಸೇರಿದಂತೆ ಹಲವರು ಆಕಾಂಕ್ಷಿತರು ಅಭಿಪ್ರಾಯ ತಿಳಿಸಿದರು.
ಅರ್ಹ ಮಹಿಳೆಯರಿಗೆ ಅಥವಾ ಪರಿಶಿಷ್ಟ ಜಾತಿಗೆ ಸೇರಿದಂತೆ ವ್ಯಕ್ತಿ ಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯಗಳೂ ಕೇಳಿ ಬಂದವು.
ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಜಿ.ಟಿ.ವೀರಪ್ಪ, ತೈಲೂರು ವೆಂಕಟಕೃಷ್ಣ, ಎಂ.ವಿ.ಧರಣೇಂದ್ರಯ್ಯ, ರಾಜು ಹಾಗೂ ಜನಪದ ವಿದ್ವಾಂಸ ವ.ನಂ.ಶಿವರಾಮು ಹಾಜರಿದ್ದರು.