ಇಸ್ಲಾಮಾಬಾದ್ (ಪಿಟಿಐ): 26/11ರಂದು ಮುಂಬೈ ಮೇಲೆ ದಾಳಿ ನಡೆಸಿದ ಆರೋಪದೊಂದಿಗೆ ಕಳೆದ ತಿಂಗಳು ಗಲ್ಲಿಗೇರಿದ ಉಗ್ರ ಅಜ್ಮಲ್ ಕಸಾಬ್ನ ಶವಕ್ಕಾಗಿ ಅವರ ಕುಟುಂಬದವರಿಂದ ಪಾಕ್ ಸರ್ಕಾರಕ್ಕೆ ಯಾವುದೇ ಮನವಿ ಬಂದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರ ಖಾತೆಯ ಸಂಸದೀಯ ಕಾರ್ಯದರ್ಶಿ ಪಲ್ವಾಷಾ ಖಾನ್ ಅವರು ಪಾಕ್ ನ್ಯಾಷನಲ್ ಅಸೆಂಬ್ಲಿಗೆ ತಿಳಿಸಿದ್ದಾರೆ. `ಶವ ತರುವಂತೆ ಕಸಾಬ್ ಕುಟುಂಬದವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾನ್, ಪಾಕಿಸ್ತಾನದ ಜೈಲಿನಿಂದ ಮೀನುಗಾರರು ಸೇರಿದಂತೆ 783 ಭಾರತೀಯ ಕೈದಿಗಳನ್ನು ಜನವರಿಯಿಂದ ಇಲ್ಲಿಯವರೆಗೂ ಬಿಡುಗಡೆ ಮಾಡಲಾಗಿದೆ. ಆದರೆ ಭಾರತದಿಂದ ಪಾಕ್ ಕೈದಿಗಳನ್ನು ಬಿಡುಗಡೆ ಮಾಡಿಸುವಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ಕುರಿತು ಉಭಯ ದೇಶಗಳ ನಡುವೆ ಸಭೆ ನಡೆದಾಗಲೆಲ್ಲಾ ಭಾರತೀಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
2008ರ ನವೆಂಬರ್ 26ರಂದು ಮುಂಬೈ ಮೇಲೆ ಹತ್ತು ಮಂದಿಯ ಲಷ್ಕರ್-ಎ- ತೈಯಬಾ ಉಗ್ರರ ತಂಡ ದಾಳಿನಡೆಸಿತ್ತು. ಈ ಘಟನೆಯಲ್ಲಿ ಒಂಬತ್ತು ಮಂದಿ ಉಗ್ರರ ಹತ್ಯೆಯಾಗಿ, ಕಸಾಬ್ ಜೀವಂತ ಸೆರೆ ಸಿಕ್ಕಿದ್ದ. ಕಳೆದ ತಿಂಗಳು ಪುಣೆಯ ಯರವಾಡ ಜೈಲಿನಲ್ಲಿ ಆತನನ್ನು ಗಲ್ಲಿಗೇರಿಸಿ, ಶವವನ್ನು ಜೈಲಿನ ಆವರಣದಲ್ಲೇ ಹೂಳಲಾಗಿತ್ತು.