ಬಸವಕಲ್ಯಾಣ: ಕಾಂಗ್ರೆಸ್ ಪಕ್ಷದಿಂದ ಮೂರು ತಿಂಗಳವರೆಗೆ ನಡೆಯುವ ನಾಗರಿಕರೊಂದಿಗೆ ಮುಖಾಮುಖಿ ಅಭಿಯಾನಕ್ಕೆ ಭಾನುವಾರ ಮಹಾತ್ಮಾ ಗಾಂಧಿ ಜಯಂತಿಯ ದಿನ ಇಲ್ಲಿ ಚಾಲನೆ ಕೊಡಲಾಯಿತು.
ಇಲ್ಲಿನ ರೀಕ್ಷಾ ಚಾಲಕರ ಕಾಲೊನಿಯಲ್ಲಿ ಪಕ್ಷದ ಜಿಲ್ಲಾ ವೀಕ್ಷಕರಾದ ಎಂ.ಎ.ಸಮೀ ಮತ್ತು ಬಾಬುರಾವ ತುಂಬಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೊನಿ ನಿವಾಸಿಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಈ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಸಂಪರ್ಕಿಸಿ ಅವುಗಳನ್ನು ಬಗೆಹರಿಸಲು ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಯಿತು.
ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಜನರ ಸಮಸ್ಯೆಗಳನ್ನು ಬಗೆಹರಿಸಲು ಸತತವಾಗಿ ಪ್ರಯತ್ನಿಸಬೇಕು. ಪಕ್ಷದ ಸಂಘಟನೆ ಬಲಗೊಳಿಸಬೇಕು ಎಂದೂ ಸಲಹೆ ಕೊಟ್ಟರು.
ಪಕ್ಷದ ನಗರ ಘಟಕದ ಅಧ್ಯಕ್ಷ ಮೀರ ಅಜರ ಅಲಿ, ತಾಲ್ಲೂಕು ಅಧ್ಯಕ್ಷ ಶಂಕರರಾವ ಜಮಾದಾರ, ಎಸ್ಸಿ ಮೋರ್ಚಾ ಅಧ್ಯಕ್ಷ ಯುವರಾಜ ಭೆಂಡೆ, ಮುಖಂಡರಾದ ಸುಧಾಕರ ಗುರ್ಜರ್, ಚಂದ್ರಕಾಂತ ಮೇತ್ರೆ, ಕಾಸಿಂ ಬೇಗ್, ಸಂತೋಷ ಗುತ್ತೇದಾರ ಉಪಸ್ಥಿತರಿದ್ದರು. ಓಣಿಯ ನಿವಾಸಿಗಳು ವಿವಿಧ ಸಮಸ್ಯೆಗಳನ್ನು ಮುಖಂಡರ ಗಮನಕ್ಕೆ ತಂದರು.