ರತ್ನಗಿರಿ, ಮಹಾರಾಷ್ಟ್ರ (ಐಎಎನ್ಎಸ್): ಹಿಂದೆಂದೂ ಕಂಡಿಲ್ಲದ ರೀತಿಯಲ್ಲಿ 400 ಎನ್ಸಿಪಿ ಕಾರ್ಯಕರ್ತರು ಅಶಿಸ್ತು ಪ್ರದರ್ಶನ ಮಾಡಿದ್ದು ಮಿತ್ರಪಕ್ಷ ಕಾಂಗ್ರೆಸ್ಸಿನ ರತ್ನಗಿರಿ–ಸಿಂಧುದುರ್ಗ ಅಭ್ಯರ್ಥಿ ನೀಲೇಶ್ ರಾಣೆ ಪರ ಪ್ರಚಾರ ನಡೆಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಮಾವೇಶವನ್ನೂ ಬಹಿಷ್ಕರಿಸಿದ್ದಾರೆ.
ಈ ಅಶಿಸ್ತಿನಿಂದಾಗಿ ಬಂಡಾಯ ಕಾರ್ಯಕರ್ತರ ನಾಯಕತ್ವ ವಹಿಸಿದ್ದ ಶಾಸಕ ದೀಪಕ್ ಕೇಸರ್ಕರ್ ಅವರನ್ನು ಪವಾರ್ ತರಾಟೆಗೆ ತೆಗೆದುಕೊಂಡರು. ನಂತರ ಕೇಸರ್ಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಏನೇ ಆದರೂ ಕಾಂಗ್ರೆಸ್ ಹಿರಿಯ ನಾಯಕ ನಾರಾಯಣ ರಾಣೆ ಮಗ ನೀಲೇಶ್ ರಾಣೆ ಪರವಾಗಿ ಪ್ರಚಾರ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಎನ್ಸಿಪಿಯ ಜಿಲ್ಲಾ ಘಟಕದ ಮುಖ್ಯಸ್ಥ ಬಾಲಾ ಭಿಸ್ಲೆ ಮತ್ತು ಕಾಸರ್ಕರ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಭಿಸ್ಲೆ ಅವರನ್ನು ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.