ಬೆಂಗಳೂರು: `ಅಲ್ಪಸಂಖ್ಯಾತರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಮತಬ್ಯಾಂಕ್ ಸೃಷ್ಟಿಸಿಕೊಳ್ಳುವ ಅನಿವಾರ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ~ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಹೇಳಿದರು.
ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಬುಧವಾರ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಮತ್ತು ನೆಹರು ಯುವ ಕೇಂದ್ರ ಸಂಘಟನೆಯ ಮಹಾನಿರ್ದೇಶಕ ಸಲೀಂ ಅಹಮದ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
`ರಾಜ್ಯದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುವ, ಪ್ರಚಾರಕ್ಕಾಗಿ ಸಮಾವೇಶಗಳನ್ನು ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ, ಈ ರೀತಿಯ ಅಗ್ಗದ ಪ್ರಚಾರ ತಂತ್ರದ ಅಗತ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಿಂದಿನಿಂದಲೂ ಕಾಂಗ್ರೆಸ್ ಮಾಡಿರುವ ಕೆಲಸ ದೇಶದ ಅಲ್ಪಸಂಖ್ಯಾತರಿಗೇ ಚೆನ್ನಾಗಿ ತಿಳಿದಿದೆ. ಕೆ.ರೆಹಮಾನ್ ಖಾನ್ ಮತ್ತು ಸಲೀಂ ಅಹಮದ್ ಅವರಿಗೆ ಪಕ್ಷದಲ್ಲಿ ನೀಡಿರುವ ಸ್ಥಾನಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ~ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ರೆಹಮಾನ್ ಖಾನ್, `ರಾಜ್ಯದಲ್ಲಿ ಮುಸಲ್ಮಾನರ ಮತಗಳನ್ನು ತನ್ನದಾಗಿಸಿಕೊಳ್ಳುವ ಹುನ್ನಾರದಲ್ಲಿ ಜೆಡಿಎಸ್ ಪಕ್ಷ ತೊಡಗಿದೆ. ಪಕ್ಷದಲ್ಲಿ ಕಾಗದದ ಹುಲಿಯಂತಿರುವ ಜಮೀರ್ ಅಹಮ್ಮದ್ ಖಾನ್ ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ಅಲ್ಪಸಂಖ್ಯಾತರ ಉದ್ಧಾರದ ನಾಟಕವಾಡುತ್ತಿದೆ. ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ ಕೊಡುಗೆ ಏನು ಎಂಬುದನ್ನು ಆ ಪಕ್ಷದ ಮುಖಂಡರು ಬಹಿರಂಗ ಪಡಿಸಲಿ~ ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, `ಕಾಂಗ್ರೆಸ್ ಪಕ್ಷ ಸದಾ ಅಲ್ಪಸಂಖ್ಯಾತರ ಜತೆಗಿದೆ. ಯಾವ ಪಕ್ಷಗಳು ಏನೇ ಕುತಂತ್ರ ನಡೆಸಿದರೂ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ಗೆ ಲಭಿಸಲಿವೆ~ ಎಂದರು. ಎಐಸಿಸಿ ಕಾರ್ಯದರ್ಶಿ ಹನುಮಂತರಾವ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ಶಾಸಕರಾದ ದಿನೇಶ್ ಗುಂಡೂರಾವ್ ಮತ್ತಿತರರು ಇದ್ದರು.
`ತಪ್ಪೊಪ್ಪಿಕೊಳ್ಳಲು ನಾಲ್ಕು ವರ್ಷ~
`ಬಿಜೆಪಿ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿದ್ದು ತಪ್ಪು ಎಂದು ಒಪ್ಪಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಲ್ಕು ವರ್ಷಗಳು ಬೇಕಾಯಿತು. ಈಗ ಅಲ್ಪಸಂಖ್ಯಾತರ ಮುಂದೆ ಕಣ್ಣೀರು ಹಾಕಿದರೆ ಮುಂದಿನ ಚುನಾವಣೆಯಲ್ಲಿ ಮತ ಗಳಿಕೆ ಸುಲಭವಾಗುತ್ತದೆ ಎಂಬ ತಪ್ಪು ಲೆಕ್ಕಾಚಾರದಲ್ಲಿ ಜೆಡಿಎಸ್ ಮುಳುಗಿದೆ. ಇದಕ್ಕೆ ಅಲ್ಪಸಂಖ್ಯಾತರು ಮರುಳಾಗಬಾರದು~
-ಕೆ.ರೆಹಮಾನ್ ಖಾನ್,
ರಾಜ್ಯಸಭೆಯ ಉಪ ಸಭಾಪತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.