ಕುಶಾಲನಗರ : ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಣಾವರ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಸಿದ್ದಲಿಂಗಪುರ, ಹರಿಸಿನಗುಪ್ಪೆ, ಬಸರುಗುಪ್ಪೆ, ಚಿಕ್ಕ ಆಳುವಾರ, ದೊಡ್ಡ ಆಳುವಾರ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶನಿವಾರ ಗ್ರಾಮಸ್ಥರು ಒತ್ತಾಯಿಸಿದರು.
ಸಮೀಪದ ಸಿದ್ಧಲಿಂಗಪುರ ಸಮುದಾಯ ಭವನದಲ್ಲಿ ಶನಿವಾರ ತೊರೆನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಟಿ.ಕೆ.ವಸಂತ್ ಅಧ್ಯಕ್ಷತೆಯಲ್ಲಿ ನಡೆದ 2011-12 ನೇ ಸಾಲಿನ ಮೊದಲು ಹಂತದ ಗ್ರಾಮಸಭೆಯಲ್ಲಿ ಕಾಡಾನೆ ಹಾವಳಿ, ಬೀದಿದೀಪದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕಾಡಂಚಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆಡಳಿತ ಮಂಡಳಿಯ ಗಮನ ಸೆಳೆದು ಕೂಡಲೇ ಪರಿಹಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಂಚಾಯ್ತಿ ವತಿಯಿಂದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಎಲ್ಲ ಮನೆಗಳಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ ಗ್ರಾಮದ ಎನ್.ಎಂ.ಬೋಪಯ್ಯ ಸಿದ್ಧಲಿಂಗಪುರ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷ್ಯಿಸ ಲಾಗುತ್ತಿದೆ ಎಂದು ಪಂಚಾಯ್ತಿ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ತೊರೆನೂರಿನಿಂದ ಬೈರಪ್ಪನ ಗುಡಿವರೆಗೆ ರಸ್ತೆ ಎರಡು ಕಡೆ ಚರಂಡಿ ನಿರ್ಮಿಸಬೇಕು ಎಂದು ಗಣೇಶ್ ಹೇಳಿದರು.
ಗ್ರಾಮಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವುದು ಸರಿಯಲ್ಲ ಗೈರು ಹಾಜರಾಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚನ್ನರಾಜು ಸಭೆಯಲ್ಲಿ ಒತ್ತಾಯಿಸಿದರು.
ಜಿ.ಪಂ.ಸದಸ್ಯೆ ಸಿ.ಕೆ.ಇಂದಿರಮ್ಮ ಮಾತನಾಡಿ ಜಿ.ಪಂ.ವತಿಯಿಂದ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಈ ಭಾಗದಲ್ಲಿ ಟ್ಯಾಂಕ್ ನಿರ್ಮಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್.ಪಿ.ರವೀಶ್ ಮಾತನಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಸವ ಯೋಜನೆಯಡಿ 22, ಇಂದಿರಾ ಆವಾಜ್ಯೋಜನೆಯಡಿ 25, ಗುಡಿಸಲು ವಾಸಿ ಯೋಜನೆಯಡಿ 4 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ತಾ.ಪಂ.ಸದಸ್ಯೆ ಜ್ಯೋತಿಶಿವಣ್ಣ, ಗ್ರಾ.ಪಂ.ಉಪಾಧ್ಯಕ್ಷ ಪಿ.ಡಿ.ರವಿಕುಮಾರ್, ನೋಡೆಲ್ ಅಧಿಕಾರಿ ತಾ.ಪಂ.ವಿಸ್ತಾರಣಾಧಿಕಾರಿ ಚನ್ನಬಸಪ್ಪ ಸದಸ್ಯರಾದ ಟಿ.ಬಿ. ಜಗದೀಶ್, ರಾಜಶೇಖರ್,ಶಾಂತಿ, ನಿಂಗಜಮ್ಮ, ದೇವರಾಜು, ಗೀತಾ, ಗೌರಮಣಿ, ಭವಾನಿಬಾಯಿ ಕಾರ್ಯದರ್ಶಿ ಬಿ.ಇ.ವೀರರಾಜು ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.