ಅರಣ್ಯ ಇಲಾಖೆ ಪ್ರತಿವರ್ಷವೂ ಭಾಗಶಃ ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಮತ್ತು ಬೀಳು ಭೂಮಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಿಸುತ್ತದೆ. ಈ ಗಿಡಗಳನ್ನು ರಕ್ಷಿಸಲು ಸುತ್ತಲೂ ಅಕೇಶಿಯಾದಂತಹ ಮರಗಳ ಕಂಬಗಳನ್ನು ಹುಗಿದು ಅದಕ್ಕೆ ಮುಳ್ಳುತಂತಿ ಬೇಲಿ ಹಾಕುತ್ತಾರೆ.
ಅಪಾರ ಹಣ ಖರ್ಚು ಮಾಡಿ ಹಾಕಲಾಗುವ ಈ ಬೇಲಿ ಹೆಚ್ಚೆಂದರೆ ನಾಲ್ಕಾರು ತಿಂಗಳುಗಳು ಮಾತ್ರ ಇರುತ್ತದೆ. ನಂತರ ಬೇಲಿಗೆ ಹಾಕಿದ ತಂತಿ ಕಳ್ಳರ ಪಾಲಾಗುತ್ತದೆ. ತಂತಿ ಬೇಲಿಯ ಬದಲು ಕತ್ತಾಳೆ, ಜಾಲಿಯಂತಹ ಸ್ವಾಭಾವಿಕ ಬೇಲಿ ಗಿಡಗಳನ್ನು ನರ್ಸರಿಗಳಲ್ಲಿ ಬೆಳೆಸಿ ಬೇಲಿಯ ಸಾಲಿನಲ್ಲಿ ನೆಡಬೇಕು.
ಇಂತಹ ಬೇಲಿ ತಯಾರಾಗಲು ಎರಡು ಮೂರು ವರ್ಷ ಬೇಕಾದರೂ ಇದು ಬಹುಕಾಲ ಬಾಳುತ್ತದೆ. ಇದರಿಂದ ಅಪಾರ ಹಣ ಮತ್ತು ಸಮಯ ಉಳಿಯುತ್ತದೆ. ಇಂತಹ ಬೇಲಿ ಜೀವ ವೈವಿಧ್ಯಕ್ಕೂ ಪೂರಕ.