ಹೋರಾಟ ಸಮಿತಿಯಿಂದ ಕಳಸಾ ಬಂಡೂರಿ ನಾಲಾ ವೀಕ್ಷಣೆ
ನರಗುಂದ:ಕಳಸಾ ಬಂಡೂರಿ ನಾಲಾ ಕಾಮಗಾರಿಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು ಎಂದು ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಸರಕಾರಕ್ಕೆ ಆಗ್ರಹಿಸಿದರು.ಕಾಮಗಾರಿ ಸ್ಥಳವಾದ ಕಣಕುಂಬಿಗೆ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿ, ಕಾಮಗಾರಿಯನ್ನು ವೀಕ್ಷಿಸಿ ಬಂದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕಳಸಾ ಬಂಡೂರಿ ಕಾಮಗಾರಿಗೆ ಸಂಬಂಧಿಸಿದಂತೆ ಕೇವಲ ಕಳಸಾ ನಾಲಾದ ಕಾಮಗಾರಿ ಆರಂಭವಾಗಿದ್ದು ಬಿಟ್ಟರೆ ಇಲ್ಲಿಯವರೆಗೆ ಬಂಡೂರಿ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಆದ್ದರಿಂದ ಸರಕಾರಗಳು ಇತ್ತ ಗಮನ ಹರಿಸಿ ಬೇಗನೇ ಬಂಡೂರಿ ಕಾಮಗಾರಿಯನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿದರು.
‘ಕಳಸಾ ನಾಲೆಯ ಕಾಮಗಾರಿಗೆ ಸಂಬಂಧಿಸಿದ ಕಾರ್ಯನಿರ್ವಾಹಕ ಎಂಜನೀಯರ್ ಕೃಷ್ಣಾಜಿರಾವ್, ಬೇಸಿಗೆ ಕೊನೆ ಹೊತ್ತಿಗೆ ನಾಲಾ ಮೂಲಕ ಎರಡು ಟಿಎಂಸಿ ನೀರು ಕೊಡುತ್ತೇವೆಂದು ಹೇಳಿದ್ದಾರೆ. ಕಾಮಗಾರಿ ಪೂರ್ಣಗೊಂಡ ನಂತರ ಕಳಸಾ ನಾಲೆಯಿಂದ ಮಲಪ್ರಭಾ ಜಲಾಶಯಕ್ಕೆ 3.36 ಟಿಎಂಸಿ ನೀರು ಹರಿಸುವುದಾಗಿ ಹೇಳಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಇನ್ನೊಂದು ಕಾಮಗಾರಿಯಾದ ಹೆಚ್ಚಿನ ನೀರು ಬರಬೇಕಾದ ಬಂಡೂರಿ ನಾಲೆಯ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಆದ್ದರಿಂದ ಈ ಕಾಮಗಾರಿ ಒಂದು ರೀತಿಯಲ್ಲಿ ನೆನೆಗುದಿಗೆ ಬಿದ್ದಂತಾಗಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದರ ಬಗ್ಗೆ ಇರುವ ಅಡೆತಡೆಗಳನ್ನು ಕೂಡಲೇ ನಿವಾರಿಸಬೇಕು’ ಎಂದರು.
‘ಅರ್ಧ ಕಾಮಗಾರಿ ಮುಗಿದರೆ ಯೋಜನೆ ಅನುಷ್ಠಾನವಾದಂತಲ್ಲ. ಈಗಾಗಲೇ ಹಲವಾರು ಸಲ ಹೇಳಿದಂತೆ ಕೋರ್ಟ್ನಿಂದ ಯಾವುದೇ ತಡೆಯಾಜ್ಞೆ ಇಲ್ಲ’ ಎಂದು ತಿಳಿಸಿದರು.ಬಂಡೂರಿ ಕಾಮಗಾರಿ ಆರಂಭ ಮಾಡದೇ ಹೋದರೆ ಯೋಜನೆ ಅನುಷ್ಠಾನಗೊಳ್ಳುವವರೆಗೂ ರಾಷ್ಟ್ರೀಕೃತ ಬ್ಯಾಂಕ್ ಸಾಲ ಹಾಗೂ ನೀರಿನ ಕರ ಕಟ್ಟುವುದಿಲ್ಲವೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಗುಡದೇರಿ, ಶಿವಾನಂದ ಮೇಟಿ, ಶರಣಪ್ಪ ಮೊರಬದ, ಅಲ್ಲಿಸಾಬ ನದಾಫ, ಸಿ.ಸಿ. ಕುಲಕರ್ಣಿ, ಮಹಾದೇವರಾವ್ ರೇವಡಿ, ಚಳ್ಳಪ್ಪ ನಾಯ್ಕರ, ಅಶೋಕ ಹಾದಿಮನಿ ಮೊದಲಾದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.