ಶ್ರೀರಂಗಪಟ್ಟಣ: ರಸ್ತೆ ಕಾಮಗಾರಿಯ ಕೆಲಸ ಪೂರ್ಣ ಆಗದಿದ್ದರೂ ಬಿಲ್ ಪಾವತಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯರ್ತರು ಬುಧವಾರ ಇಲ್ಲಿನ ಲೋಕೋಪಯೋಗಿ ಇಲಾಖೆ ಕಚೇರಿಗೆ ತೆರಳಿ ಪ್ರಕರಣ ಕುರಿತು ತನಿಖೆ ನಡೆಸುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಅವರನ್ನು ಒತ್ತಾಯಿಸಿದರು.
ತಾಲ್ಲೂಕಿನ ಪಂಪ್ಹೌಸ್-ಇಲವಾಲ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣ ಮುಗಿದಿಲ್ಲ. ಆದರೆ ಶೇ 80ರಷ್ಟು ಹಣ ಪಾವತಿಯಾಗಿದೆ. ರೂ.1.20 ಕೋಟಿ ವೆಚ್ಚದ ಕಾಮಗಾರಿಗೆ ಚೆಕ್ (765549) ಮೂಲಕ ರೂ.89.47 ಹಣ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ ಶಾಸಕರ ಹಸ್ತಕ್ಷೇಪ ಇರುವ ಗುಮಾನಿ ಇದ್ದು ಕೂಲಂಕಷ ತನಿಖೆ ನಡೆಸಬೇಕು ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಮಾತನಾಡಿ, ಮಾ.30ರ ಒಳಗೆ ಸರ್ಕಾರದ ಅನುದಾನ ಬಳಕೆ ಆಗದಿದ್ದರೆ ಹಣ ವಾಪಸಾಗುತ್ತದೆ ಎಂಬ ಕಾರಣಕ್ಕೆ ಬಿಲ್ ನೀಡಲಾಗಿದೆ. ಆದರೂ ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದ ಹಣ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದರು. ಪಾಂಡು, ಕಡತನಾಳು ಬಾಬು, ಕೃಷ್ಣೇಗೌಡ ಇತರರು ಇದ್ದರು.