ಗುಲ್ಬರ್ಗ: ‘ಕಾಯಕ ಮತ್ತು ಸರ್ವಜ್ಞ’ (ಶ್ರಮ ಮತ್ತು ಜ್ಞಾನ) ಮೂಲಕ ವ್ಯಕ್ತಿತ್ವ ಪರಿಪೂರ್ಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಗುಲ್ಬರ್ಗದ ಸರ್ವಜ್ಞ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಅವರು ಉಪನ್ಯಾಸ ನೀಡಿದರು. ಶ್ರಮ ಹಾಗೂ ಜ್ಞಾನ ಬದುಕಿನಲ್ಲಿ ಮುಖ್ಯ. ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಈಗಿನವರು ಕಾಯಕ ಮರೆತು ‘ಕಾಯ’ ಸಾಕುವ ಕೆಲಸ ಮಾಡುತ್ತಿದ್ದಾರೆ. ವಿದ್ಯೆ ಬಂದೊಡನೆ ಶ್ರಮವನ್ನು ಅವಮಾನ ಎಂದು ಕಾಣಬೇಡಿ. ಎರಡೂ ಇದ್ದರೆ ಯಶಸ್ಸು ಎಂದರು.
“ರಾಜಕಾರಣಿಗಳು ರಾಜ್ಯಪಾಲರು, ಅಧಿಕಾರಿಗಳ ಬಗ್ಗೆ ಭರವಸೆ ಹೊರಟು ಹೋಗಿದೆ. ವ್ಯವಸ್ಥೆಯ ಪಾಲಕರ ಬಗ್ಗೆ ವಿಶ್ವಾಸ ಕಳೆದು ಹೋಗುತ್ತಿದೆ. ಮುಂದಿನ ಪೀಳಿಗೆಯ ಬಾಲಕರ ಬಗ್ಗೆ ವಿಶ್ವಾಸವಿದೆ. ಬಾಲಕರು ನದಿಪಾತ್ರದಲ್ಲಿನ ಉಸುಕು. ಉಳಿದೆಡೆಯ ಮರುಭೂಮಿಗಳಲ್ಲ. ಉಸುಕಿನ ಒಳಗೆ ನೀರು ಇದೆ” ಎಂದು ವಿಶ್ಲೇಷಿಸಿದರು.
ನಮ್ಮ ಸೇವೆ ದೀನ-ದಲಿತರಿಗೆ ಮೀಸಲಾಗಿರಬೇಕು. ಅರ್ಹರಿಗೆ ಸೇವೆ ಸಲ್ಲಿಸಿದರೆ ಅದು ದೇವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳನ್ನು ಚಿಕ್ಕವರೆಂದು ಕಡೆಗಣಿಸಬೇಡಿ. ಯಾರ ಮನದಲ್ಲಿ ಭವಿಷ್ಯದ ಗಾಂಧಿ, ನ್ಯೂಟನ್, ವಿವೇಕಾನಂದ, ಅಬ್ದುಲ್ ಕಲಾಂ ಇದ್ದಾರೆ ಎಂದು ನಮಗೆ ತಿಳಿದಿರುವುದಿಲ್ಲ ಅವರನ್ನು ಶೋಧಿಸಿ ಹೊರತೆಗೆಯಿರಿ ಎಂದು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ಚನ್ನಾರೆಡ್ಡಿ ಪಾಟೀಲ, ಪ್ರಾಂಶುಪಾಲ ಎಂ.ಸಿ. ಕಿರದಳ್ಳಿ, ನವಲಿ ಕೃಷ್ಣಾಚಾರ್ಯ ಉಪಸ್ಥಿತರಿದ್ದರು. ಕರಣೇಶ ಬಿ.ಎಂ., ವಿಜಯಕುಮಾರ ತೇಗಲತಿಪ್ಪಿ, ಉಪನ್ಯಾಸಕರು ಮತ್ತಿತರರು ಇದ್ದರು.