ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ಸಂಸ್ಕೃತಿಯೇ ಬದುಕಿಗೆ ದಾರಿದೀಪ

Last Updated 6 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಕಡೂರು (ಚಿಕ್ಕಮಗಳೂರು): `ನೆಲದ ಸಂಪತ್ತು ಕೊಳ್ಳೆಹೋಗುತ್ತಿದೆ. ರಾಜಕೀಯ ಮೌಲ್ಯಗಳು ದೂಳೀಪಟವಾಗಿವೆ. ಬದುಕಿನ ಎಲ್ಲ ಸಂಗತಿಗಳು ಅಳಿವಿನಂಚಿಗೆ ತಲುಪಿವೆ. ನಮ್ಮ ಕೃಷಿ ಜ್ಞಾನ, ಸಂಸ್ಕೃತಿ ನಾಶವಾಗುತ್ತಿದೆ. ಮತ್ತೆ ಇವೆಲ್ಲವನ್ನು ಮರುಪೂರಣಗೊಳಿಸಿಕೊಳ್ಳಲು ನಮ್ಮ ಮೂಲದ ಕಡೆಗೆ ಹೊರಳಬೇಕು~ ಎಂದು ಕವಿ ಡಾ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಎಪಿಎಂಸಿ ಪ್ರಾಂಗಣದ ಮಹಾಕವಿ ಲಕ್ಷ್ಮೀಶ ವೇದಿಕೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನವಾದ ಭಾನುವಾರ ಅವರು `ಶರಣರಲ್ಲಿ ಅಕಾಯಚರಿತರು~ ವಿಷಯ ಕುರಿತು ಉಪನ್ಯಾಸ ನೀಡಿದರು.

 ಜಾಗತೀಕರಣದ ಸಂದರ್ಭದಲ್ಲಿ ನಮ್ಮನ್ನು, ನಮ್ಮ ಸಂಸ್ಕೃತಿಯನ್ನು ಮರುಪೂರಣಗೊಳಿಸಿಕೊಳ್ಳಲು ಬೇಕಾದ ಅಂಶ ನಮ್ಮ ಜನಪದ, ಜನಪದದಿಂದ ಬಂದಂತಹ ವಚನದಲ್ಲಿದೆ. ನಮ್ಮ ಪರಂಪರೆಯಲ್ಲಿ ಮೌಲ್ಯ, ಆದರ್ಶವಿದೆ. ಅದು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಿದೆ. ಆದರೆ, ನಾವು ಈ ಬಗ್ಗೆ ಯೋಚಿಸುತ್ತಿಲ್ಲ. ಜಗತ್ತಿನ ಸಾಹಿತ್ಯದಲ್ಲಿ ವಚನ ದೊಡ್ಡ ವಿಸ್ಮಯ. ನಮ್ಮ ವಚನಕಾರರು ಕಾಯಕದ ಮೂಲಕವೇ ಬದುಕು ಕಟ್ಟಿಕೊಂಡಿದ್ದರು. ವಚನಕಾರರ ಮೂಲ ಹುಡುಕಿದರೆ ಎಲ್ಲಿಯೂ ಅವರ ಗುರುತು ಸಿಗುವುದಿಲ್ಲ. ಆದರೆ, ಅವರು ತಮ್ಮ  ಕಾಯಕಕ್ಕೆ ಮಾತ್ರ ಮಾನ್ಯತೆ ನೀಡಿದ್ದರು. ಸತ್ಯಶುದ್ಧ ಕಾಯಕ ಸಂಸ್ಕೃತಿ ಮೂಲಕವೇ ಬದುಕಿಗೆ ದಾರಿದೀಪವಾದ ವಚನ ಸಾಹಿತ್ಯ ಕಟ್ಟಿಕೊಟ್ಟರು ಎಂದು ಹೇಳಿದರು. 

`ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ~ ವಿಷಯ ಕುರಿತು ಮಾತನಾಡಿದ `ಪ್ರಜಾವಾಣಿ~ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಸಮಾಜದಲ್ಲಿ ಕಳೆದು ಹೋಗಿರುವ ಮೌಲ್ಯಗಳು ಮತ್ತು ಆದರ್ಶಗಳ ಮರುಸ್ಥಾಪನೆ ಮಾಡಬೇಕಾದ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.

ಸಮಾಜವನ್ನು ಸ್ವಚ್ಛವಾಗಿಡುವ ಜತೆಗೆ ಆದರ್ಶ ಸಮಾಜ ನಿರ್ಮಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ. ಆದರೆ ಮಾಧ್ಯಗಳು ರೋಚಕ ಸುದ್ದಿಗಳನ್ನು ನೀಡುವ ಭರಾಟೆಯಲ್ಲಿ ಸಾತ್ವಿಕರ ಕೂಗು ಕಳೆದು ಹೋಗುತ್ತಿದೆ. ಇಂದು ಸಾತ್ವಿಕರು ಚುನಾವಣೆಯಲ್ಲಿ ನಿಂತು ಆಯ್ಕೆಯಾಗುವ ಸ್ಥಿತಿಯಿಲ್ಲ. ಇತ್ತೀಚಿನ ಚುನಾವಣೆಗಳನ್ನು ನೋಡಿದರೆ ಮತದಾರರು ಕೂಡ ಆಸೆಬುರುಕರಾಗಿರುವುದು ಕಾಣಿಸುತ್ತಿದೆ. ಇದನ್ನು ನಿಯಂತ್ರಿಸಲು ಗುರುಪೀಠಗಳಿಂದಲೂ ಆಗುತ್ತಿಲ್ಲ ಎಂದು ವಿಷಾದಿಸಿದರು.

ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಇಲ್ಲದಿದ್ದರೆ ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತಾಗುತ್ತದೆ. ಪತ್ರಕರ್ತ ಯಾವಾಗಲು ಬಡವನೇ ಆಗಿರಬೇಕು. ಇಲ್ಲದಿದ್ದರೆ ಆತನ ಲೇಖನಿ ಅಂತಃಸತ್ವ ಕಳೆದುಕೊಂಡು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಸಾತ್ವಿಕರ, ಬಡವರ ಕೂಗಿಗೆಗೆ ಧ್ವನಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಈಶ್ವರಾನಂದ ಸ್ವಾಮೀಜಿ, ಕೆರೆಗೋಡಿ-ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ  ನೇತೃತ್ವ ವಹಿಸಿದ್ದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ  ಶಾಂತೇಗೌಡ, ಶಾಸಕರಾದ ಡಿ.ಎಸ್. ಸುರೇಶ್, ಡಾ.ವೈ.ಸಿ. ವಿಶ್ವನಾಥ್, ಬಿ.ಸಿ. ನಾಗೇಶ್, ಎಸ್.ಕೆ. ಬಸವರಾಜನ್, ಮಾಜಿ ಸಚಿವ ಕೋಳಿವಾಡ, ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್, ಡಾ.ಎಸ್. ಪ್ರಭುಕುಮಾರ್, ಸಾಹಿತಿ ಅಸಾದುಲ್ಲಾ ಬೇಗ್ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT