ಯಲಹಂಕ: ಯಲಹಂಕ ಉಪನಗರದ 4ನೇ ಹಂತದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ಮಧ್ಯಾಹ್ನ ಕಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಂಸದ ಹಾಗೂ ನಗರದ ನಿವೃತ್ತ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಗಾಯಗೊಂಡಿದ್ದಾರೆ. ಅವರ ಹಣೆಗೆ ಪೆಟ್ಟಾಗಿದೆ.
ಮಧ್ಯಾಹ್ನ ಒಂದು ಗಂಟೆಯ ವೇಳೆ ಸಾಂಗ್ಲಿಯಾನ ಅವರು ಪತ್ನಿಯೊಂದಿಗೆ ಫಾರ್ಚೂನರ್ ಕಾರಿನಲ್ಲಿ ಸ್ನೇಹಿತರ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇವರ ಕಾರನ್ನು ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ತಿರುಗಿಸುವ ಸಂದರ್ಭದಲ್ಲಿ ಮಿನಿಬಸ್ ಕಾರಿಗೆ ಡಿಕ್ಕಿ ಹೊಡೆಯಿತು. ಈ ರಭಸಕ್ಕೆ ಸಾಂಗ್ಲಿಯಾನ ಮುಖ ಮುಂದಿನ ಸೀಟಿನ ಹಿಂಭಾಗಕ್ಕೆ ಬಡಿಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಣೆಗೆ ಏಳು ಹೊಲಿಗೆ ಹಾಕಿ, ಚಿಕಿತ್ಸೆ ನೀಡಿ ಬಳಿಕ ಅವರನ್ನು ಮನೆಗೆ ಕಳುಹಿಸಲಾಯಿತು.
ಯಲಹಂಕ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಸ್ ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.