ಕಾಸರಗೋಡು: ಕೇರಳಕ್ಕೆ ಕಾರ್ಮಿಕರ ಹೆಸರಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾ ನದ ಪ್ರಜೆಗಳು ನುಸುಳುತ್ತಿರುವ ಆಘಾತಕಾರಿ ಮಾಹಿತಿ ರಾಜ್ಯ ಗೃಹ ಇಲಾಖೆಗೆ ಲಭಿಸಿದೆ.
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರ ರಾಜ್ಯಗಳ ಕಾರ್ಮಿಕರ ಹೆಸರು ನೋಂದಣಿ ಕಡ್ಡಾಯಗೊಳಿಸಿ ಅದೇಶ ಹೊರಡಿಸಿದೆ.
ತಿರುವನಂತಪುರದಲ್ಲಿ ಮಂಗಳ ವಾರ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಪರಿಣಾಮ ಕೇರಳದಲ್ಲಿ ದುಡಿಯುತ್ತಿ ರುವ ಎಲ್ಲಾ ಹೊರ ರಾಜ್ಯಗಳ ಕಾರ್ಮಿಕರ ಪೂರ್ಣ ಮಾಹಿತಿಗಳನ್ನು ಕಾರ್ಮಿಕ ಇಲಾಖೆಯ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಗ್ರಹಿಸುವರು.
ಈ ಮಾಹಿತಿಗಳನ್ನು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾಗುವುದು. ಹೊರ ರಾಜ್ಯದ ಕಾರ್ಮಿಕರ ಸೋಗಿನಲ್ಲಿ ಭಾರತದ ಗಡಿ ದಾಟಿ ಬಂದ ಬಾಂಗ್ಲಾ ಮತ್ತು ಪಾಕಿಸ್ತಾನದ ಸಾವಿರಾರು ಮಂದಿ ಕೇರಳದಲ್ಲಿ ಅಕ್ರಮವಾಗಿ ದುಡಿಯುತ್ತಿರುವ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ಲಭಿಸಿತ್ತು. ಇಂಥ ಕಾರ್ಮಿಕರ ಪೈಕಿ ಹಲವರು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐ ಏಜೆಂಟರಾಗಿ, ರಾಜ್ಯದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸಹಾಯ ಒದಗಿಸುತ್ತಿದ್ದಾರೆ.
ಇವರಿಗೆ ಐಎಸ್ಐ ಆರ್ಥಿಕ ನೆರವು ನೀಡುತ್ತಿದೆ. ಇದು ರಾಜ್ಯದ ಭದ್ರತೆಗೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಹೊಸ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಆದೇಶದ ಪ್ರಕಾರ ಹೆಸರು ನೋಂದಾಯಿಸಲಾಗುವ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಸಹಿತ ಎಲ್ಲಾ ಕಾರ್ಮಿಕ ಸವಲತ್ತುಗಳನ್ನು ನೀಡಲಾಗುವುದು.
ಹೊರರಾಜ್ಯದ ಕಾರ್ಮಿಕರು ವಾಸಿಸುವ ಮತ್ತು ದುಡಿಯುವ ಪ್ರದೇಶಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ನೋಂದಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪರಿಶೀಲಿಸುವರು. ಈ ಸಂದರ್ಭದಲ್ಲಿ ವಿದೇಶಿ ಕಾರ್ಮಿಕರು ಪತ್ತೆಯಾದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳುವರು.