ಬೆಂಗಳೂರು: `ಶಿಕ್ಷಣ ಇಲಾಖೆಯ ಕಾರ್ಯಸೂಚಿಯನ್ನು ಶಿಕ್ಷಕರೇ ನಿರ್ಧರಿಸುವಂತಾಗಬೇಕು. ತಮ್ಮ ಅನುಭವದಿಂದ ಶಿಕ್ಷಣದ ಗುಣಮಟ್ಟವನ್ನು ಬೆಳೆಸಲು ಸಹಕಾರಿಯಾಗಬೇಕು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಅಂತರರಾಷ್ಟ್ರೀಯ ಶಿಕ್ಷಕರ ದಿನೋತ್ಸವ~ ಹಾಗೂ `ಪ್ರಶಸ್ತಿ ಪ್ರದಾನ~ ಸಮಾರಂಭದಲ್ಲಿ ಅವರು ಮಾತನಾಡಿದರು.`ಮಕ್ಕಳ ಬೆಳವಣಿಗೆಗೆ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಾಥಮಿಕ ಶಿಕ್ಷಕರು ಪ್ರಧಾನ ಪಾತ್ರವನ್ನು ವಹಿಸುತ್ತಾರೆ.
ಆದ್ದರಿಂದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿಯೂ ಕೂಡ ಅವರು ಪ್ರಧಾನ ಪಾತ್ರವನ್ನು ವಹಿಸಬೇಕು. ಇದಕ್ಕಾಗಿ ತಮ್ಮ ಎ್ಲ್ಲಲಾ ಅನುಭವಗಳನ್ನು ಧಾರೆ ಎರೆಯಬೇಕು~ ಎಂದರು.`ಶಿಕ್ಷಣವು ಬರೀ ಕೇವಲ ಅಂಕಪಟ್ಟಿ ಮತ್ತು ಉದ್ಯೋಗ ಪಡೆಯಲು, ಭೌತಿಕವಾದ ಐಷಾರಾಮಿ ಜೀವನವನ್ನು ಹೊಂದಲು ಬೇಕು ಎಂಬ ಅಂಶವು ಮಕ್ಕಳಲ್ಲಿ ಬೆಳೆಯದಂತೆ ಗಮನವನ್ನು ಹರಿಸಬೇಕು. ಮಕ್ಕಳಲ್ಲಿ ಜ್ಞಾನದ ದೀವಿಗೆಯನ್ನು ಹಚ್ಚಲು ಶ್ರಮ ವಹಿಸಬೇಕು~ ಎಂದರು.
ಸಂಸದ ಅನಂತಕುಮಾರ್ ಮಾತನಾಡಿ, `ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಾದ ಪ್ರಾಥಮಿಕ ಶಿಕ್ಷಕರಿಗೆ ಮತದಾನದ ಹಕ್ಕು ದೊರೆಯಬೇಕು. ಇದಕ್ಕಾಗಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಒತ್ತಾಯಿಸಲಾಗುವುದು~ ಎಂದರು.
`ಶಿಕ್ಷಕರು ಮತ್ತು ಶಿಕ್ಷಣ ಸಚಿವರಿಗಿಂತ ಶಿಕ್ಷಣದ ಪ್ರಮುಖ ಬಿಂದು ಮಕ್ಕಳು ಮತ್ತು ಅವರ ಬೆಳವಣಿಗೆಯಾಗಿದೆ. ಮಕ್ಕಳು ದೇಶದ ಮುಂದಿನ ಆಸ್ತಿ, ಸಂಪತ್ತು. ಅವರಲ್ಲಿ ಉತ್ತಮವಾದ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಶಿಕ್ಷಕರು ಶ್ರಮಿಸಬೇಕು~ ಎಂದು ಹೇಳಿದರು.
ಉತ್ತಮ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಉತ್ತಮ ಶಾಲಾ ಪ್ರಶಸ್ತಿಗಳನ್ನು ಬೆಳಗಾವಿ, ಗುಲ್ಬರ್ಗ, ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಶಾಲೆಗಳಿಗೆ ನೀಡಲಾಯಿತು.