`ಕಠಿಣ ಪರಿಶ್ರಮ ಮತ್ತು ವಿಧೇಯತೆಗೆ ಇಲ್ಲಿ ಬೆಲೆಯೇ ಇಲ್ಲ~. -ಬೇಸರದಿಂದ ಹೇಳಿಕೊಂಡರು ನಿರ್ದೇಶಕ ಚಂದ್ರಶೇಖರ ಶ್ರೀವಾಸ್ತವ್. ಗಾಂಧಿನಗರದ ಭಾಷೆ ತಿಳಿಯದೆ ಇಲ್ಲಿ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದು ಅವರ ಅನುಭವದ ಮಾತು.
`ಪಟ್ರೆ ಲವ್ಸ್ ಪದ್ಮ~ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿ ನಿರಾಸೆಗೊಂಡಿದ್ದ ಚಂದ್ರಶೇಖರ್ ಕಾಲದ ಮಹಿಮೆಯನ್ನು ಅರಿಯಲು ಹೊರಟಿದ್ದಾರೆ. ಎಲ್ಲದಕ್ಕೂ ಕಾಲ ಕೂಡಿ ಬರುತ್ತದೆ ಎಂಬ ಭರವಸೆಯೂ ಅವರಲ್ಲಿತ್ತು. `ಕಾಲಾಯ ತಸ್ಮೈ ನಮಃ~ ಎಂದು ಪ್ರೇಕ್ಷಕನತ್ತ ಕೈಮುಗಿದಿರುವ ಅವರಿಗೆ ನಿರ್ಮಾಪಕರ ಬೆಂಬಲ ಇರುವುದರಿಂದ ಬಲ ಇಮ್ಮಡಿಗೊಂಡಿದೆ.
`ಕಾಲಾಯ ತಸ್ಮೈ ನಮಃ~ ಚಿತ್ರದ ದನಿಮುದ್ರಿಕೆಗಳ ಬಿಡುಗಡೆ ಸಮಾರಂಭವದು. ಒಮ್ಮೆ ಸೋತ ನಿರ್ದೇಶಕನಿಗೆ ಅವಕಾಶ ಸಿಗುವುದು ಕಷ್ಟ. ಆದರೆ ನನ್ನ ಮೇಲಿನ ನಂಬಿಕೆಯಿಂದ ನಿರ್ಮಾಪಕ ಮಾರುತಿ ಜಡಿಯಾರ್ ಅವಕಾಶವಿತ್ತಿದ್ದಾರೆ ಎಂದು ಚಂದ್ರಶೇಖರ್ ಕೃತಜ್ಞತೆ ಅರ್ಪಿಸಿದರು. ಕತೆ ಕೇಳಿದ ಕೂಡಲೇ ಕಾಲ್ಷೀಟ್ ನೀಡಿದ ನಟ ಯೋಗೀಶ್ಗೂ ಅದರಲ್ಲಿ ಪಾಲಿತ್ತು.
`ಖಾಲಿ ರೋಡು... ಒಂಟಿ ಗರ್ಲು... ಕೆಂಪು ಲಿಪ್ಸು.. ಕೈಲಿ ಬುಕ್ಸು...~ ಎಂಬ `ಕೊಲವೆರಿ ಡಿ~ ಶೈಲಿಯ ಹಾಡೊಂದು ಚಿತ್ರದಲ್ಲಿದೆ. ಅದನ್ನು ಸ್ವತಃ ನಾಯಕ ಯೋಗೀಶ್ ಹಾಡಿದ್ದಾರೆ. ಅನಾರೋಗ್ಯದ ನಡುವೆಯೂ ಹಾಜರಾಗಿದ್ದ ನಟ ಯೋಗೀಶ್ ಹೆಚ್ಚು ಮಾತನಾಡಲು ಮುಂದಾಗಲಿಲ್ಲ. ನಾಯಕಿ ಮಧುಬಾಲಾ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಯನ್ನೂ ನಿರ್ವಹಿಸಿದರು. ಆದರೆ ಸಿನಿಮಾದ ತಮ್ಮ ಪಾತ್ರದ ಬಗ್ಗೆ ಅವರು ಮಾತನಾಡಲಿಲ್ಲ.
ಸಂಗೀತ ನಿರ್ದೇಶಕ ಎ.ಎಂ.ನೀಲ್ ಆರು ಹಾಡುಗಳಿಗೆ ಸಂಗೀತ ಹೊಸೆದಿದ್ದಾರೆ. ಹಾಡುಗಳ ಸಾಹಿತ್ಯ ಮತ್ತು ನಿರ್ದೇಶಕರ ಪರಿಶ್ರಮದ ಬಗ್ಗೆ ಅವರು ಮೆಚ್ಚುಗೆಯ ಮಾತನ್ನಾಡಿದರು.
`ದಾನಮ್ಮ ದೇವಿ~ ಮತ್ತು `ಪಕ್ಕದ್ಮನೆ ಹುಡುಗಿ~ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಮಾರುತಿ ಜಡಿಯಾರ್ ಈ ಚಿತ್ರದ ನಿರ್ಮಾಪಕರು. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ. ನಮ್ಮ ಚಿತ್ರದ ಯಶಸ್ಸು ಸಹ ಕಾಲದ ಮೇಲೆ ಅವಲಂಬಿತ ಎಂದು ಅವರು ಹೇಳಿದರು. ್ಢ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.