ತುಮಕೂರು: ದಿಲೀಪ್ ಪಡಗಾಂವಕರ್ ನೇತೃತ್ವದ ಸಂವಾದಕರ ಸಮಿತಿ ನೀಡಿರುವ ವರದಿಯನ್ನು ತಿಸ್ಕರಿಸಬೇಕೆಂದು ಆಗ್ರಹಿಸಿ ಜಮ್ಮು ಕಾಶ್ಮೀರ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಜೆಪಿ, ಆರ್ಎಸ್ಎಸ್ ಮತ್ತು ಎಬಿವಿಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಮಿತಿ ವರದಿಯಲ್ಲಿ ದೇಶ ವಿರೋಧಿ ಅಂಶಗಳಿದ್ದು, ಅದನ್ನು ಅಂಗೀಕರಿಸುವುದರಿಂದ ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟಾಗುತ್ತದೆ. ಜಮ್ಮು ಮತ್ತು ಕಾಶ್ಮೀರವನ್ನು ದಕ್ಷಿಣ ಮತ್ತು ಮಧ್ಯ ಏಷ್ಯಾ ನಡುವಿನ ಸೇತು ಎಂದಿರುವುದು ಸೇರಿದಂತೆ ದೇಶ ವಿರೋಧಿ ನಿಲುವುಗಳಿವೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಪ್ರಸ್ತುತ ಜಮ್ಮು ಕಾಶ್ಮೀರದ ಬುದ್ಧಿವಂತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತಿಲ್ಲ. ಬೇರೆ ರಾಜ್ಯದವರು ಭೂಮಿ ಖರೀದಿಸಿ ಕಾರ್ಖಾನೆ ನಿರ್ಮಿಸುವಂತಿಲ್ಲ. ಇಲ್ಲಿ ಪ್ರತ್ಯೇಕತಾ ಭಾವನೆ ಎದುರಿಸಲಾಗುತ್ತಿದೆ. ದಿಲೀಪ್ ನೇತೃತ್ವದ ಸಂವಾದಕರ ಸಲಹೆಗಳು ಸಂವಿಧಾನ ಬಾಹಿರವಾಗಿದ್ದು, ಕೇಂದ್ರ ಸರ್ಕಾರ ತಿರಸ್ಕರಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
65 ವರ್ಷಗಳಿಂದ ಜಮ್ಮು ಕಾಶ್ಮೀರ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರ ಕಾರಣ. ಪ್ರಸ್ತುತ ಜಮ್ಮು ಕಾಶ್ಮೀರದ 2/3 ಭಾಗ ಬೇರೆ ದೇಶದ ವಶವಾಗಿದೆ. ಜಮ್ಮು ಕಾಶ್ಮೀರ ಭಾರತ ಮಾತೆಯ ಸಿಂಧೂರ, ಅದನ್ನು ರಕ್ಷಿಸುವಲ್ಲಿ ಸಂಘಟಿತರಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಆರ್.ನಂದೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಪ್ರಸಾದ್, ನಗರ ಘಟಕದ ಅಧ್ಯಕ್ಷ ರುದ್ರೇಶ್, ಆರ್ಎಸ್ಎಸ್ ಜಿಲ್ಲಾ ಸಂಚಾಲಕ ನಾಗೇಂದ್ರಪ್ರಸಾದ್, ಎಬಿವಿಪಿ ಕಾರ್ಯದರ್ಶಿ ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.