ಕೊಳ್ಳೇಗಾಲ: ನಗರದಲ್ಲಿ ಕುಂಬಾರರ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಹಣ ಮಂಜೂರು ಮಾಡುವುದಾಗಿ ಸಂಸದ ಆರ್.ಧ್ರುವನಾರಾಯಣ ಭರವಸೆ ನೀಡಿದರು.
ಪಟ್ಟಣದ ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ, ಚೌಡೇಶ್ವರಿ ಕುಂಬಾರರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕುಂಬಾರರ ಮಹಿಳಾ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬಾರರು ಸಮಾಜದ ಹಿಂದುಳಿದ ಜನಾಂಗವಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ವಿ.ಪಿ.ಸಿಂಗ್ ಅವರನ್ನು ಈ ಸಮಾವೇಶದಲ್ಲಿ ನೆನಪಿಸುವುದು ಅತ್ಯಗತ್ಯ. ಯಾವುದೇ ಸಮಾಜ ಶಿಕ್ಷಣದಿಂದ ಮಾತ್ರ ಮೇಲೆ ಬರಲು ಸಾಧ್ಯ. ಆದ್ದರಿಂದ ಕುಂಬಾರ ಬಂಧುಗಳು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಹಿಂದುಳಿದ ಜನಾಂಗದ ಮಹಿಳೆಯರು ನಡೆಸುತ್ತಿರುವ ಬೃಹತ್ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ ಎಂದು ಶಾಸಕ ಆರ್. ನರೇಂದ್ರ ನುಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಯೋಜನೆಗಳನ್ನು ರೂಪಿಸಿ ಮಹಿಳೆಯರಲ್ಲಿ ಮನೆ ಮಾಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳಬೇಕು ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಶಾಸಕ ಜಿ.ಎನ್.ನಂಜುಂಡಸ್ವಾಮಿ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಎಸ್.ಬಾಲರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಶ್ರೀನಿವಾಸ, ಜಿ.ಪಂ. ಸದಸ್ಯೆ ಚಂದ್ರಕಲಾ ಬಾಯಿ, ಡಿ.ದೇವ ರಾಜು, ಶಿವಮ್ಮ, ರಾಜ್ಯ ಕುಂಬಾರರ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ, ಅಧ್ಯಕ್ಷೆ ಶಶಿಕಲಾ ಶಿವಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಸುಧಾ ಶಿವಮಲ್ಲು, ರಾಮಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜು, ನಗರಸಭಾ ಸದಸ್ಯ ಕೆ.ಕೆ.ಮೂರ್ತಿ, ಮಲ್ಲಿಕಾರ್ಜುನ ಇದ್ದರು.