ಕೃಷ್ಣರಾಜಪೇಟೆ: ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಸೆಪ್ಟೆಂಬರ್ 25 ಮತ್ತು 26ರಂದು ಕುಂಭಮೇಳ ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಶಾಸಕ ಕೆ.ಸಿ. ನಾರಾಯಣ ಗೌಡ ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳ ಬೇಕಾದ ತುರ್ತು ಕಾರ್ಯಗಳ ಬಗ್ಗೆ ಅಧಿಕಾರಿಗಳು ಮತ್ತು ಮುಖಂಡ ರೊಂದಿಗೆ ಭಾನುವಾರ ಚರ್ಚೆ ನಡೆಸಿದರು.
ಇದೇ ಪ್ರಥಮ ಬಾರಿಗೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಯಾವುದೇ ಕುಂದು ಬಾರದಂತೆ ಅರ್ಥಪೂರ್ಣವಾಗಿ ನಡೆಸಲು ಸ್ವತಃ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿದ್ದಾರೆ. ಲಕ್ಷಾಂತರ ಮಂದಿ ಕುಂಭಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಆಯೋಜಿಸಲಾ ಗುತ್ತಿರುವ ಪವಾಡಪುರುಷ ಮಲೆಮಹದೇಶ್ವರರ ಜಯಂತಿ ಕಾರ್ಯಕ್ರಮ ಸಹ ಉತ್ತಮವಾಗಿ ಮೂಡಿಬರಬೇಕಾಗಿದೆ. ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೂ ಅಗತ್ಯ ಮಾರ್ಗದರ್ಶನ ನೀಡಿ ಸಮರದೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ತಹಶೀಲ್ದಾರ್ ಬಿ.ಅಹೋಬಲಯ್ಯ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಮಾಜಿ ಅಧ್ಯಕ್ಷ ಆರ್.ಕೆ. ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಾಂಬಹಳ್ಳಿ ಅಶೋಕ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ. ಸಣ್ಣಸ್ವಾಮಿಗೌಡ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಮುಖಂಡರಾದ ಅಕ್ಕಿಹೆಬ್ಬಾಳು ಶ್ರೀನಿವಾಸ್, ಅಂಚನಹಳ್ಳಿ ಸುಬ್ಬಣ್ಣ, ಬಂಡಿಹೊಳೆ ಸುರೇಶ್ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.