ಮೈಸೂರು: `ರಸ್ತೆಬದಿ ಕೆಲಸ ನಿರ್ವಹಿ ಸುತ್ತಿರುವ ಕುಶಲಕರ್ಮಿಗಳು ಹಾಗೂ ಕುಂಬಾರರಿಗೆ ಶೀಘ್ರವೇ ವ್ಯವಸ್ಥಿತ ಮಾರಾಟ ಕೇಂದ್ರವನ್ನು ಆರಂಭಿಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಮೈಸೂರು ಜಿಲ್ಲೆ ಕುಂಭೇಶ್ವರ ಕುಂಬಾರರ ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
`ಕುಶಲಕರ್ಮಿಗಳು, ಕುಂಬಾರರು, ಸ್ವಯಂ ಸೇವಾ ಸಂಘಗಳು ಹಾಗೂ ಸಹಕಾರಿ ಸೊಸೈಟಿಗಳಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸಕಲ ಸೌಲಭ್ಯಗಳುಳ್ಳ ಮಾರಾಟ ಕೇಂದ್ರವನ್ನು ಒಂದೂವರೆ ತಿಂಗಳಿನಲ್ಲಿ ಆರಂಭಿಸಲಾ ಗುವುದು. ಪ್ರತಿಯೊಂದು ಮಳಿಗೆ ಮಾಲೀಕರಿಂದ ದಿನಕ್ಕೆ 10 ರೂಪಾಯಿ ಶುಲ್ಕ ಪಡೆಯಲಾಗುವುದು. ಈ ಹಣದಲ್ಲಿ ಉಚಿತ ವಿದ್ಯುತ್, ನೀರು ಹಾಗೂ ಜೀವವಿಮೆ ಪಾಲಿಸಿ ಕೊಡಲಾ ಗುವುದು.
ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯತ್ನ ವಾಗಿದ್ದು, ಇದರಿಂದ ಕುಂಬಾರರು ಹಾಗೂ ಇತರರಿಗೆ ತಾವು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ದೊರಕಲಿದೆ~ ಎಂದು ಹೇಳಿದರು.
`ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಲಿದೆ. ಬದಲಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕುಂಬಾರರು ಮಣ್ಣಿನ ಉತ್ಪನ್ನಗಳಿಗೆ ಆಧುನಿಕ ಸ್ಪರ್ಶ ನೀಡಬೇಕು. ಆ ಮೂಲಕ ಲಾಭ ಗಳಿಸಬೇಕು. ಇತ್ತೀಚಿನ ದಿನಗಳಲ್ಲಿ ತ್ರಿತಾರಾ ಹಾಗೂ ಪಂಚತಾರಾ ಹೋಟೆಲ್ಗಳಲ್ಲಿ ಮಣ್ಣಿನ ಸ್ನಾನ ಎಂಬ ಹೊಸ ಪದ್ಧತಿ ಜಾರಿಗೆ ಬಂದಿದ್ದು, ಕುಂಬಾರರ ಮಣ್ಣಿಗೆ ಬೇಡಿಕೆ ಬಂದಿದೆ. ಕುಂಬಾರರು ಇದರ ಲಾಭ ಪಡೆದುಕೊಳ್ಳಬೇಕು~ ಎಂದರು.
`ಕೆರೆ ಹೂಳು ಎತ್ತಲು ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಈ ಹಿಂದೆ ವರ್ಷಕ್ಕೆ ಒಂದು ಬಾರಿ ಕುಂಬಾರರೇ ಕೆರೆಯ ಹೂಳೆತ್ತಿ, ಅಲ್ಲಿನ ಫಲವತ್ತಾದ ಮಣ್ಣನ್ನು ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹವಾದ ಮಣ್ಣು ವರ್ಷವಿಡೀ ಅವರಿಗೆ ಬಳಕೆ ಆಗುತ್ತಿತ್ತು. ಈಗಲೂ ಹೂಳೆತ್ತುವ ಕೆಲಸವನ್ನು ಕುಂಬಾರರಿಗೆ ವಹಿಸುವ ಬಗ್ಗೆ ಚಿಂತನೆ ನಡೆದಿದೆ. ಅಲ್ಲದೆ, ಕುಂಬಾರರ ಕುಟುಂಬಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನ ಹಂಚಿಕೆ ಮಾಡುವ ಬಗ್ಗೆ ಚರ್ಚಿಸಲಾಗಿದ್ದು, ಶೀಘ್ರವೇ ಕ್ರಮಕೈಗೊಳ್ಳಲಾಗುವುದು~ ಎಂದರು.
ಕರ್ನಾಟಕ ರಾಜ್ಯ ಕುಂಬಾರ ಮಹಾ ಸಂಘದ ಅಧ್ಯಕ್ಷ ಕೆ.ಸಿ.ಶಿವಕುಮಾರ್ ಚೌಡಶೆಟ್ಟಿ, ಕುಂಬಾರರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಟ್ರಸ್ಟ್ನ ಅಧ್ಯಕ್ಷ ಕೆ.ಟಿ.ಲಕ್ಷ್ಮಣಶೆಟ್ಟಿ, ಜಿಲ್ಲಾಧ್ಯಕ್ಷ ನಾಗಣ್ಣ, ಉಪಾಧ್ಯಕ್ಷ ಕೆ.ಎಂ. ಹೋಟೆಲ್ ನಂಜುಂಡಯ್ಯ, ಚಾಮರಾ ಜನಗರ ಜಿಲ್ಲಾಧ್ಯಕ್ಷ ಟಿ.ಎಸ್.ರಾಜೇಂದ್ರ ಹಾಗೂ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.