ಮೈಸೂರು: `ಕನ್ನಡ ಕನ್ನಡ ಎಂದು ಕೂಗಾಡಿದರೆ ಭಾಷೆಯ ಉದ್ದಾರವಾಗದು. ಕುವೆಂಪು ಸಾರಿದ ವಿಶ್ವಮಾನವತೆಯ ಸಂದೇಶವನ್ನು ಪ್ರತಿ ಮಗುವಿಗೂ ತಿಳಿಸಿದಾಗ ಮಾತ್ರ ಕನ್ನಡಿಗರ ಏಳಿಗೆ ಸಾಧ್ಯ' ಎಂದು ಸಾಹಿತಿ ಪ್ರೊ.ಎಂ.ಜಿ. ಬಿರಾದಾರ ಹೇಳಿದರು.
ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಜಾತಿಯ ಬಗ್ಗೆ ಮಗುವಿಗೆ ಹೇಳಿಕೊಡುತ್ತಿದ್ದೇವೆ. ಅದರ ಬದಲು ವಿಶ್ವ ಮಾನವ ಚಿಂತನೆಯನ್ನು ಇಂದಿನ ಪೀಳಿಗೆಗೆ ಹೇಳಬೇಕಿದೆ. ಕುವೆಂಪು ಜನ್ಮದಿನ ಬರಿ ಆಚರಣೆಗೆ ಸಿಮೀತವಾಗ ಬಾರದು. ಅವರ ಕೃತಿಗಳ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಅದು ಕುವೆಂಪು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಹೊಸಗನ್ನಡ ಸಾಹಿತ್ಯಕ್ಕೆ ಕುವೆಂಪು ಅಪಾರ ಕಾಣಿಕೆ ನೀಡಿದ್ದಾರೆ. ಮನುಷ್ಯ ಹಾಗೂ ಪ್ರಕೃತಿಯೇ ಅವರ ಸಾಹಿತ್ತದ ಮುಖ್ಯವಸ್ತು. ವೈಚಾರಿಕತೆ ಅವರ ಎಲ್ಲ ಕಾವ್ಯಗಳ ಜೀವಾಳ. ಸಮಾಜದ ಆಗು-ಹೋಗುಗಳನ್ನು ಇಟ್ಟುಕೊಂಡೇ ಸಾಹಿತ್ಯ ಸೃಷ್ಟಿ ಮಾಡುತ್ತಿದ್ದರು. ಪುಟ್ಟಪ್ಪ ಅವರ ವೈಚಾರಿಕತೆ, ದಾರ್ಶಕನಿಕತೆಯನ್ನು ಇಡೀ ಮಾನವ ಜನಾಂಗವೇ ಹಾಡಿಹೊಗಳಿದೆ. ಆದರೆ ನಮ್ಮವರು ಅವರ ಬಗ್ಗೆ ಎಷ್ಟು ಅಧ್ಯಯನ ಮಾಡಿದ್ದಾರೆ. ಜೀವನಪೂರ್ತಿ ಕುವೆಂಪು ಕೃತಿಗಳನ್ನು ಅಧ್ಯಯನ ಮಾಡಿದರು ಸಾಲದು ಎಂದು ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ ತಳವಾರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಬಿ. ಶಿವರಾಜು ಅಧ್ಯಕ್ಷತೆ ವಹಿ ಸಿದ್ದರು. ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಇದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಯಲ್ಲಿ ಕುವೆಂಪು ಅವರ ಅಪರೂಪದ ಭಾವಚಿತ್ರಗಳನ್ನು ಪ್ರದರ್ಶನ ಏರ್ಪಡಿಸಲಾಗಿತ್ತು.