ಹಂಪಿ: ‘ತಾಂತ್ರಿಕ ತಂಡ, ಕಾನೂನು ತಂಡ ಹಾಗೂ ವಕೀಲ ನಾರಿಮನ್ ಅವರ ಸಲಹೆ ಪಡೆದು ಕೃಷ್ಣಾ ನ್ಯಾಯಮಂಡಳಿ ತೀರ್ಪು ವಿಷಯದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಹಂಪಿ ಉತ್ಸವ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೃಷ್ಣಾ ನ್ಯಾಯಮಂಡಳಿ ತೀರ್ಪು ವಿಷಯದಲ್ಲಿ ವಿರೋಧ ಪಕ್ಷಗಳು ತಮ್ಮದೇ ಆದ ನಿಲುವನ್ನು ವ್ಯಕ್ತಪಡಿಸಿವೆ. ಈ ಕಾರಣದಿಂದ ಎಲ್ಲರ ಸಲಹೆ ಪಡೆದು ಸರ್ಕಾರ ತೀರ್ಮಾನಕ್ಕೆ ಬರಲಿದೆ’ ಎಂದರು.
‘ಹೊಸ ಗಣಿ ಪರವಾನಗಿ ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕಾನೂನು ಪಾಲನೆಯೊಂದಿಗೆ ಪಾರದರ್ಶಕವಾಗಿ ನಡೆದುಕೊಳ್ಳಲಿದೆ. ಅಲ್ಲದೆ ಸಿ ಕೆಟಗರಿಯ 51 ಗಣಿ ಕಂಪೆನಿಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಲಾಗುವುದು. ಗಣಿ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿರುವುದರಿಂದ ಈಗಲೇ ಯಾವ ತೀರ್ಮಾನಕ್ಕೂ ಬರುವುದಿಲ್ಲ’ ಎಂದು ತಿಳಿಸಿದರು.
‘ಹಂಪಿ ಉತ್ಸವದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ ಉತ್ಸವಕ್ಕೆ ಜನರ ಕೊರತೆ ಇಲ್ಲ. ಉತ್ಸವದ ಪ್ರವೇಶಕ್ಕೆ ವಿಧಿಸಿದ್ದ ಎಲ್ಲ ಶುಲ್ಕವನ್ನೂ ರದ್ದುಗೊಳಿಸಲಾಗುವುದು’ ಎಂದು ಹೇಳಿದರು.