ಶ್ರೀರಂಗಪಟ್ಟಣ: ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಗುರುವಾರದಿಂದ ಇಳಿಮುಖವಾಗಿದೆ. ಶುಕ್ರವಾರ ಸಂಜೆ ವೇಳೆಗೆ ಜಲಾಶಯಕ್ಕೆ 12,345 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ವಾರದ ಹಿಂದೆ ಒಳ ಹರಿವು 20 ಸಾವಿರ ಕ್ಯೂಸೆಕ್ ಗಡಿ ದಾಟಿತ್ತು.
ಆ.4ರಂದು 118 ಅಡಿ ಇದ್ದ ಜಲಾಶಯದ ಮಟ್ಟ ಆ.12ರ ಹೊತ್ತಿಗೆ 123.20 ಅಡಿಗೆ ತಲುಪಿತ್ತು. ಶುಕ್ರವಾರ ಜಲಾಶಯದಲ್ಲಿ 123.45 ಅಡಿ ನೀರಿದ್ದು, 24 ಗಂಟೆಗಳಲ್ಲಿ ನೀರಿನ ಮಟ್ಟ ಕೇವಲ .25 ಅಡಿ ಮಾತ್ರ ಹೆಚ್ಚಿದೆ.
ಒಳ ಹರಿವು ಈ ಪ್ರಮಾಣದಲ್ಲಿದ್ದರೆ 124.80 ಅಡಿ ಸಾಮರ್ಥ್ಯದ ಜಲಾಶಯದ ಭರ್ತಿಗೆ ಇನ್ನೂ ನಾಲ್ಕಾರು ದಿನಗಳು ಬೇಕಾಗಬಹುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.