ಗದಗ: ಸಹಕಾರಿ ರಂಗದ ಭೀಷ್ಮ ಕೆ.ಎಚ್.ಪಾಟೀಲರ 87ನೇ ಜಯಂತ್ಯುತ್ಸವವನ್ನು ಬುಧವಾರ ಹುಲಕೋಟಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಾಟೀಲರು ತಮ್ಮ ಹುಟ್ಟೂರಿನಲ್ಲಿ ಸಹಕಾರಿ ತತ್ವದ ಬೀಜ ಬಿತ್ತಿ, ಹೆಮ್ಮರವಾಗಿಸಿರುವುದಕ್ಕೆ ಸಾಕ್ಷಿಯಾಗಿ ಗದಗ ಸಹಕಾರಿ ಜವಳಿ ಗಿರಣಿಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಸ್ಥಾಪನೆಯಾಗಿದ್ದು, ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಬುಧವಾರ ನಡೆಯಿತು.
ಗ್ರಾಮದ ಜನರಿಗೆ ಶುದ್ಧ ನೀರು ಪೂರೈಕೆ ಮಾಡಬೇಕು ಎನ್ನುವ ಉದ್ದೇಶದಿಂದ ಗ್ರಾಮ ಪಂಚಾಯ್ತಿಯ ಸಹಕಾರ ಪಡೆದುಕೊಂಡು ಗ್ರಾಮಸ್ಥರೆಲ್ಲ ಸೇರಿ ಸಹಕಾರಿ ತತ್ವದ ಅಡಿಯಲ್ಲಿ ವಂತಿಗೆ ಸೇರಿಸಿ ಸ್ಥಾಪನೆ ಮಾಡಿರುವ ಶುದ್ಧ ನೀರಿನ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು.
ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ವಿ.ಎಸ್.ಮಳಿಮಠ, ಪ್ರತಿಯೊಬ್ಬ ರಾಜಕಾರಣಿಯೂ ಕೆ.ಎಚ್. ಪಾಟೀಲರ ಆದರ್ಶವನ್ನು ಮಾದರಿಯಾಗಿಟ್ಟುಕೊಂಡರೆ ರಾಜ್ಯದ ಎಲ್ಲ ಊರುಗಳು ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದರು.
ಮಾಜಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಂಪಿ ವಿವಿ ಕುಲಪತಿ ಎ.ಮುರಿಗೆಪ್ಪ, ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್ ಮತ್ತಿತರರು ಹಾಜರಿದ್ದರು.