ಬಳ್ಳಾರಿ: ತಾಲ್ಲೂಕಿನ ಶಂಕರಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಕುಂಟೆ ಗ್ರಾಮದ ಕೆರೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಇತ್ತೀಚೆಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ನಿರ್ಮಿಸಲಾಗಿರುವ ಕೆರೆಯು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ. ನೀರು ಶೇಖರಣೆ ಸಂದರ್ಭ ಮುಖ್ಯ ಕಾಲುವೆಯಿಂದ ನೀರು ಸರಬರಾಜು ಮಾಡದೆ, ರೈತರು ಕೃಷಿ ಕಾರ್ಯಕ್ಕಾಗಿ ಬಳಕೆ ಮಾಡುವ ಸಣ್ಣ ಕಾಲುವೆ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರೆಯದೆ, ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಬೊಬ್ಬಕುಂಟೆ ಗ್ರಾಮದ ಸುತ್ತಲೂ ಇರುವ ಶಂಕರಬಂಡೆ, ಇಬ್ರಾಹಿಂಪುರ, ಮತ್ತು ವಿಜಯಪುರ ಕ್ಯಾಂಪ್ಗಳಿಗೆ ಇದೇ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಬೇಸಿಗೆಯಲ್ಲಿ ಕೆರೆಯನ್ನು ಸ್ವಚ್ಛಗೊಳಿಸದ್ದರಿಂದ, ಹಿಂದಿನ ವರ್ ಸಂಗ್ರಹಿಸಿದ ನಿಂತ ನೀರಿಗೆ ಹೊಸ ನೀರು ಸರಬರಾಜು ಮಾಡಲಾಗುತ್ತಿದೆ. ಕಲುಷಿತ ಹಳೆಯ ನೀರಿನೊಂದಿಗೆ ಹೊಸ ನೀರೂ ಕಲುಷಿತಗೊಂಡು ಗ್ರಾಮಸ್ಥರು ಮಾರಕ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಲಾಯಿತು.
ಕೂಡಲೇ ಕೆರೆಯಲ್ಲಿರುವ ಹೂಳು ತೆಗೆದು, ಬೇಸಿಗೆಯಲ್ಲಿ ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಹೊಸ ನೀರು ಶೇಖರಣೆ ಮಾಡುವ ಮೂಲಕ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.
ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ಕೃಷ್ಣ ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು.