ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೆರೆಗಳ ನಾಡಲ್ಲೇ' ಮಾಯವಾದ ಕೆರೆ

Last Updated 18 ಜುಲೈ 2013, 10:26 IST
ಅಕ್ಷರ ಗಾತ್ರ

ಕೋಲಾರ: ಇಡೀ ರಾಜ್ಯದಲ್ಲಿ `ಕೆರೆಗಳ ನಾಡು' ಎಂದೇ ಖ್ಯಾತಿಯಾಗಿರುವ ಜಿಲ್ಲೆಯಲ್ಲಿ ಈಗ ಕೆರೆಗಳು ನಾಪತ್ತೆಯಾಗುತ್ತಿರುವ ಕಾಲ. ಹಲವು ತಲೆಮಾರುಗಳಿಗೆ ನೀರುಣಿಸಿದ ಕೆರೆಗಳು ದಶಕಗಳಿಂದ ನಿರಂತರ ಒತ್ತುವರಿಗೆ ಒಳಗಾಗುತ್ತಿದ್ದು ಮೂಲ ಸ್ವರೂಪವನ್ನಷ್ಟೇ ಅಲ್ಲದೆ, ಇಡೀ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅನಿವಾರ್ಯ ಸನ್ನಿವೇಶವನ್ನು ಎದುರಿಸುತ್ತಿವೆ. ಆದರೆ ಕೆರೆ ಒತ್ತುವರಿಯನ್ನು ತೆರವು ಮಾಡಿ ಅವುಗಳನ್ನು ರಕ್ಷಿಸುವ ಪ್ರಯತ್ನಗಳು ಮಾತ್ರ ಸಾಯುವವನ ಬಾಯಿಗೆ ಗುಟುಕು ನೀರು ಬಿಡುವಂತೆ ಕಾಣಿಸುತ್ತಿವೆ.

ಮೈಸೂರು ಸರ್ಕಾರವು 1968ರಲ್ಲಿ ಪ್ರಕಟಿಸಿದ ಗೆಜೆಟಿಯರ್ ಪ್ರಕಾರ ಜಿಲ್ಲೆಯ ಐದು ತಾಲ್ಲೂಕಿನಲ್ಲಿ 35,783 ಕೆರೆಗಳಿದ್ದವು. ಆದರೆ ನಾಲ್ಕು ದಶಕ ಕಳೆದ ಬಳಿಕ ಈ ಕೆರೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶೇ 95ರಷ್ಟು ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ. ಅಂದರೆ ಕಣ್ಮರೆಯಾಗಿವೆ.

ಜಿಲ್ಲೆಯ ಐದು ತಾಲ್ಲೂಕಿನ ಪೈಕಿ ಅತಿ ಹೆಚ್ಚು ಕೆರೆಗಳಿದ್ದ ತಾಲ್ಲೂಕು ಎಂದೇ ಖ್ಯಾತಿಯಾಗಿದ್ದ ಮುಳಬಾಗಲಿನಲ್ಲೂ ಕೆರೆಗಳ ಸಂಖ್ಯೆ ಮೂರಂಕಿಗೆ ಇಳಿದಿದೆ. ಅದೇ ರೀತಿ ಉಳಿದ ನಾಲ್ಕು ತಾಲ್ಲೂಕಿನಲ್ಲೂ ಕೆರೆಗಳ ಸಂಖ್ಯೆ ಮೂರಂಕಿಗೆ ಇಳಿದಿದೆ. ಪರಿಣಾಮವಾಗಿಯೇ, ಐದಂಕಿಯಷ್ಟಿದ್ದು ಜಿಲ್ಲೆಯ ಒಟ್ಟಾರೆ ಕೆರೆಗಳ ಸಂಖ್ಯೆಯು ನಾಲ್ಕಂಕಿಗೆ ಕುಸಿದಿದೆ.  ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಹೆಕ್ಟೇರಿನಷ್ಟು ಅಚ್ಟುಕಟ್ಟು ಪ್ರದೇಶ ಹೊಂದಿರುವ ಕೆರೆಗಳು ಕೇವಲ 11.

44 ವರ್ಷಗಳ ಬಳಿಕ ಈಗ ಶೇ 5ರಷ್ಟು ಕೆರೆಗಳು ಮಾತ್ರ ಉಳಿದಿವೆ. 2012ರ ಜನವರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಐದು ತಾಲ್ಲೂಕಿನ ತಹಶೀಲ್ದಾರರು ಸಲ್ಲಿಸಿದ ವರದಿ ಪ್ರಕಾರ, 2095 ಕೆರೆಗಳಲ್ಲೂ ಹಲವು ಒತ್ತುವರಿಗೆ ಒಳಗಾಗಿವೆ. ಅವುಗಳ ತೆರವು ಕಾರ್ಯ ಮಾತ್ರ ನಿರೀಕ್ಷೆಯಂತೆ ನಡೆಯುತ್ತಿಲ್ಲ.

ಕೆರೆಗಳಿಗೆ ನೀರು ಹರಿಸುವ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾವೂ ನೆನೆಗುದಿಗೆ ಬಿದ್ದಿರುವುದರಿಂದ ಹಲವು ವರ್ಷಗಳಿಂದ ಮಳೆ ನೀರು ಕೆರೆಗಳಿಗೆ ಬರುತ್ತಿಲ್ಲ. ಜಿಲ್ಲೆಯ ಜನ ತಮ್ಮೂರಿನ ಕೆರೆಗಳು ತುಂಬಿರುವುದನ್ನು ನೋಡಿ ದಶಕ ಕಳೆದಿದೆ. ಕೆರೆಗಳು ಮಾತ್ರ ಭಣಗುಡುತ್ತಿವೆ.

ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಜಲಾಯನ ಇಲಾಖೆಯ, ಜಲಸಂವರ್ಧನಾ ಯೋಜನೆ ನೇತೃತ್ವದಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಪ್ರಯೋಜನ ಮಾತ್ರ ಅತಿ ಕಡಿಮೆ ಎಂಬ ಅಸಮಾಧಾನ ಸಾರ್ವತ್ರಿಕವಾಗಿದೆ.
ಮಳೆ ಆಧಾರಿತ: ಯಾವುದೇ ನದಿ ಮೂಲವಿಲ್ಲದ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳೂ ಮಳೆ ಆಧಾರಿತ ಕೆರೆಗಳೇ ಆಗಿವೆ.

ಪಾಲಾರ್ ಉತ್ತರ ಪೆನ್ನಾರ್, ದಕ್ಷಿಣ ಪಿನಾಕಿನಿ ಮತ್ತು ಪಾಪಾಘ್ನಿ ನದಿಗಳ  ಜಲಮಾರ್ಗದಲ್ಲಿ ನಿರ್ಮಾಣವಾಗಿರುವ ಈ ಕೆರೆಗಳು ಒಂದು ಕಾಲದಲ್ಲಿ ಜಿಲ್ಲೆಯ ನೀರಾವರಿಗೆ ಮೂಲಮಾತೃಕೆಗಳಂತೆ ಇದ್ದವು. ಆದರೆ ಈಗ ಅವುಗಳ ಮೇಲಿನ ಅವಲಂಬನೆ ಎಂಬುದು ಕೊಳವೆಬಾವಿಗಳನ್ನು ಕೊರೆಸುವುದಕ್ಕೆ ಮಾತ್ರ ಎಂಬುದಕ್ಕೆ ಮಾತ್ರ ಸೀಮಿತವಾಗಿದೆ. ಕೆರೆಯಂಗಳಲ್ಲಿ ಕೊಳವೆಬಾವಿಗಳನ್ನು ಕೊರೆದು ನೀರು ಪೂರೈಸುವ ಕೆಲಸ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆದಿದೆ.

ಒತ್ತುವರಿ: ಜಿಲ್ಲೆಯ ಕೆರೆಗಳನ್ನು ಸಾವಿರಾರು ಎಕರೆ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಲಾಗಿದೆ. ಕೋಲಾರ ತಾಲ್ಲೂಕಿನಲ್ಲಿ 1059 ಎಕರೆ, ಮಾಲೂರಿನಲ್ಲಿ  618 ಎಕರೆ, ಮುಳಬಾಗಲಿನಲ್ಲಿ 118 ಎಕರೆ, ಬಂಗಾರಪೇಟೆಯಲ್ಲಿ 910 ಎಕರೆ ಮತ್ತು ಶ್ರೀನಿವಾಸಪುರದಲ್ಲಿ 2385 ಎಕರೆಯಷ್ಟು ಕೆರೆ ಭೂಮಿ ಒತ್ತುವರಿಯಾಗಿದೆ.

ಕೆರೆ ಒತ್ತುವರಿ ವಿಚಾರದಲ್ಲಿ ಶ್ರೀನಿವಾಸಪುರ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ಕೋಲಾರ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ.
ಬಂಗಾರಪೇಟೆ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ.

ಕಳೆದ ವರ್ಷ ಒತ್ತವರಿ ತೆರವು ಮಾಡಲು ಸೂಚಿಸಲಾಗಿತ್ತು.ಅದರಂತೆ ಐದು ತಾಲ್ಲೂಕಿನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರ ಪ್ರಗತಿ ವಿವರಗಳನ್ನು ಸಲ್ಲಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಜಿಲ್ಲೆಯ ಕೆರೆ ಅಂಕಿ-ಅಂಶ
ತಾಲ್ಲೂಕು       1968       2012 

----------------------------

ಕೋಲಾರ        7,623      283
ಮುಳಬಾಗಲು    10,804      549
ಶ್ರೀನಿವಾಸಪುರ    5,230       375
ಮಾಲೂರು      5,563       393
ಬಂಗಾರಪೇಟೆ      6,563      495
ಒಟ್ಟು           35,783     2095

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT