ರೋಣ: ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಅವುಗಳಲ್ಲಿ ಮಳೆಯ ನೀರನ್ನು ಸಂಗ್ರಹಿಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರಿನ ಹಾಗೂ ಜಾನವಾರುಗಳ ಬಳಕೆಗೆ ಸಹಾಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ತಾಲ್ಲೂಕಿನ ಸೋಮನಕಟ್ಟಿ ಗ್ರಾಮದ ಕೆರೆಯ ಪುನರುಜ್ಜೀವನ ಹಾಗೂ ಕರಿಯಮ್ಮದೇವಿ ದೇವಸ್ಥಾನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೆರೆಗಳ ಅಭಿವೃದ್ಧಿಗಾಗಿ ರೂ 5ಕೋಟಿ ಬಿಡುಗಡೆಗೊಳಿಸಿದ್ದಾರೆ. ನರಗುಂದ ಮತಕ್ಷೇತ್ರದಲ್ಲಿ 2.50ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸೋಮನಕಟ್ಟಿ ಗ್ರಾಮದ ಕೆರೆ ನಿರ್ಮಾಣಕ್ಕಾಗಿ ರೂ 14ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಹೆಚ್ಚಿನ ಅನುದಾನವನ್ನು ಸಹ ನೀಡುವುದಾಗಿ ಭರವಸೆ ನೀಡಿದರು. ಗ್ರಾಮದ ಕರಿಯಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೆ ರೂ 3ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಗ್ರಾಮೀಣ ಜನತೆ ವಿಶೇಷವಾಗಿ ಯುವ ಜನತೆ ಕೆರೆಗಳ ಮಹತ್ವವನ್ನು ಅರಿತುಕೊಂಡು ಅವುಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿರುವ ಕೆರೆಗಳ ಪುನರುಜ್ಜೀವನಕ್ಕಾಗಿ ರೂ 2ಕೋಟಿಯನ್ನು ಮೀಸಲಿರಿಸಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ಹುಲ್ಲೂರ ಗ್ರಾ.ಪಂ. ಅಧ್ಯಕ್ಷ ಶಿವಣ್ಣ ಕೆಂದೂರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿ.ಪಂ. ಎಂಜಿನಿಯರ್ ವಿ.ಕೆ. ಕಾಳಪ್ಪನವರ, ತಾ.ಪಂ. ಉಪಾಧ್ಯಕ್ಷ ಶಿವಕುಮಾರ ನೀಲಗುಂದ, ಮಾಜಿ ತಾ.ಪಂ. ಅಧ್ಯಕ್ಷ ವಿ.ಎಸ್.ಹಿರೇಮಠ, ಬಸವಂತಪ್ಪ ತಳವಾರ, ಸುಭಾಸ ದಾನರಡ್ಡಿ, ಶಾಂತಾ ಅಂಗಡಿ, ಮಮತಾಜ್ ಚಿತ್ತಾಪೂರ, ಮುತ್ತಣ್ಣ ಅನವಾಲರ, ಶರಣಪ್ಪ ಅಂಗಡಿ, ಶರಣಪ್ಪ ಬರಡ್ಡಿ, ಎಂ.ಎಂ. ಹೆರಕಲ್ಲ, ಮುದಿಯಪ್ಪ ಕರಡಿ ಮುಂತಾದವರು ಹಾಜರಿದ್ದರು. ಜಿ.ಬಿ. ಬಂಡಿಹಾಳ ಸ್ವಾಗತಿಸಿದರು, ಪಿ.ಎಚ್. ಹೊಸಳ್ಳಿ ವಂದಿಸಿದರು.