ಗಂಗಾವತಿ: ‘ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಚಾರನೂ ನಡೆದಿಲ್ಲ, ಹಗರಣನೂ ನಡೆದಿಲ್ಲ. ಎಲ್ಲಾನೂ ಸುಳ್ಳು. ಮಾಡಾಕ ಏನು ಕೆಲ್ಸಾ ಇಲ್ದಿರೋರು ಮಾಡಾದಾದ್ರೂ ಏನು? ಹೀಂಗಾ ಆರೋಪ ಮಾಡೋದು ಬಿಟ್ರಾ..?’ ಇದು ಕನ್ನಡ ಮತ್ತು ಸಂಸ್ಕ್ರತಿ ಸಚಿವ ಗೋವಿಂದ ಕಾರಜೋಳರ ಪ್ರಶ್ನೆ.ಕಾರಜೋಳ ಅವರು, ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಕೊಪ್ಪಳ ತಾಲ್ಲೂಕಿನ ಬೀಸರಹಳ್ಳಿಯಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ಬೋಗಸ್ ಬಿಲ್ ಸೃಷ್ಟಿಸಿ ಹಣ ಎತ್ತಲಾಗಿದೆ ಎಂದು ಬಿಜೆಪಿ ಮುಖಂಡ ಅಂದಾನಪ್ಪ ಅಗಡಿ ಆರೋಪಿಸಿದ್ದರು.
ಬುಧವಾರ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಸಚಿವ ಕಾರಜೋಳ ನಗರಕ್ಕೆ ಆಗಮಿಸಿದ್ದಾಗ ‘ಪ್ರಜಾವಾಣಿ’ ಈ ಬಗ್ಗೆ ಗಮನ ಸೆಳೆಯಿತು. ಸಚಿವರು ತಮ್ಮದೆ ಪಕ್ಷದ ಮುಖಂಡ ಅಂದಾನಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.‘ಬೀಸರಳ್ಳಿ ಯೋಜನೆಯ ರೂ. 6.60 ಕೋಟಿಯದ್ದು ಅಲ್ಲ. ಕೇವಲ ರೂ. 1.77 ಕೋಟಿ ಮೊತ್ತದ್ದು.
ಆರೋಪ ಮಾಡುವವರು ಮೊದಲು ಮಾಹಿತಿ ಸಮರ್ಪಕ ಪಡೆಯಬೇಕು. ಹಣ ದುರುಪಯೋಗವಾಗಿಲ್ಲ. ಗುತ್ತಿಗೆದಾರರ ವಿಳಂಬದಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ’
ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಮುಖ್ಯ ಎಂಜಿನಿಯರ್ಗಳಿಗೆ ಸೂಚಿಸಲಾಗಿದೆ. ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಲಾಸ್ ಆಪ್ ಪೇನಲ್ಲಿ ಕೆಲಸ ಮಾಡಿಕೊಡುವಂತೆ ಸೂಚಿಸಲಾಗಿದೆ’ ಎಂದು ಸಚಿವ ಹೇಳಿದರು.
ಸಿ.ಡಿ ಗಮನಕ್ಕೆ ಇಲ್ಲ: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕೊಳೆಯುತ್ತಿರುವ ದಾಸ ಸಾಹಿತ್ಯದ ಸಿ.ಡಿ ಬಗ್ಗೆ ತಮ್ಮ ಗಮನಕ್ಕೆ ಇಲ್ಲ. ಈಗ ನಿಮ್ಮಿಂದನೇ (ಪ್ರಜಾವಾಣಿ) ಕೇಳಿದ್ದು, ಹಾಗೊಂದು ವೇಳೆ ಸಂಗತಿ ನಿಜವಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತೇನೆ’ ಎಂದರು.‘ಇಲಾಖೆಯಲ್ಲಿ ಧೂಳು ತಿನ್ನುತ್ತಿರುವ ಪುಸ್ತಕಗಳ ಬಗ್ಗೆ ಗಮನ ಸೆಳೆದಾಗ ‘ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೇಗೆ ಕೆಲ್ಸಾ ಮಾಡಿದೀವಿ ಅಂತ ಎಲ್ಲರಿಗೂ ಗೊತ್ತು. ಅದೇ ರೀತಿ ಮುಂದಿನ ದಿನದಲ್ಲಿ ಕೆಲಸ ಮಾಡ್ತೀವಿ’ ಎಂದರು.