ಬಳ್ಳಾರಿ: ಜಿಲ್ಲೆಯಾದ್ಯಂತ ಕಳೆದ ವರ್ಷ ಮಳೆಯಿಂದಾಗಿ ಬೆಳೆಹಾನಿಯಾದ ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಬುಧವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕ ಎ.ಕೆ.ಸೂದ್ ಅವರ ನೇತೃತ್ವದಲ್ಲಿ ಕೇಂದ್ರ ಅಧ್ಯಯನ ತಂಡವು ಜಿಲ್ಲೆಯಾದ್ಯಂತ ಸಂಭವಿಸಿದ ಹಾನಿಯನ್ನು ಪರಿಶೀಲಿಸಿ, ಜಿಲ್ಲಾ ಆಡಳಿತದಿಂದ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಿತು.ಶೀಘ್ರವೇ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಜೀವಹಾನಿ, ಪ್ರಾಣಿಹಾನಿ, ಬೆಳೆಹಾನಿ ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಅಪಾರ ನಷ್ಟ ಸಂಭವಿಸಿ, ಸುಮಾರು ರೂ. 70 ಕೋಟಿ ನಷ್ಟವಾಗಿದೆ ಎಂದು ತಂಡಕ್ಕೆ ಜಿಲ್ಲಾಧಿಕಾರಿ ಬಿ.ಶಿವಪ್ಪ ಮಾಹಿತಿ ನೀಡಿದರು.ಹಾನಿಗೊಳಗಾದ ಪ್ರದೇಶ, ಕಟ್ಟಡ, ರಸ್ತೆ, ಸೇತುವೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯೊಂದಿಗೆ ಕೇಂದ್ರ ಅಧ್ಯಯನ ತಂಡವು ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.
ಈಗಾಗಲೇ ಕೈಗೊಂಡಿರುವ ಪರಿಹಾರ ಕಾರ್ಯಗಳನ್ನು ಸಹ ತಂಡಕ್ಕೆ ತಿಳಿಸಲಾಗಿದೆ. ಈ ಪ್ರಸ್ತಾವನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.ತಂಡವು ಸಮಗ್ರ ಮಾಹಿತಿ ಪಡೆದು ಹೆಚ್ಚಿನ ಅನುದಾನ ನೀಡಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಮುತ್ತಯ್ಯ, ಸಹಾಯಕ ಆಯುಕ್ತ ಆರ್.ವೆಂಕಟೇಶ್, ತಹಸೀಲ್ದಾರ್ ಶಶಿಧರ್ ಬಗಲಿ, ಪಶುವೈದ್ಯ ಇಲಾಖೆ ಉಪನಿರ್ದೇಶಕ ಡಾ.ಪಂಪಾಪತಿ, ಕೃಷಿ ಜಂಟಿ ನಿರ್ದೇಶಕ ರಾಮಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಇಂಗಳಗಿ, ಜಿಲ್ಲಾ ಪಂಚಾಯ್ತಿ ಅಭಿಯಂತರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವೆಂಕಟರಮಣ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅನ್ನದಾನಯ್ಯ, ಡಿಡಿಪಿಐ ಡಾ.ಎಚ್.ಬಾಲರಾಜು, ಬಿಸಿಎಂ ಅಧಿಕಾರಿ ದೇವಯ್ಯ, ಸಮಾಜ ಕಲ್ಯಾಣ ಅಧಿಕಾರಿ ರಾಜಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುರೇರಾ ಸೇರಿದಂತೆ ಮತ್ತಿತರೆ ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು.
ರೂಪನಗುಡಿ ಸೇತುವೆ, ಗುಂತಕಲ್ಲು-ಚೇಳ್ಳಗುರ್ಕಿ ರಸ್ತೆ, ಹಗರಿ-ಪರಮದೇವನ ಹಳ್ಳಿ ರಸ್ತೆ, ಚಾಗನೂರು- ಪರಮದೇವನ ಹಳ್ಳಿ ರಸ್ತೆ, ಹೊಸ ಮೋಕಾ-ಬಸರಕೋಡು ರಸ್ತೆ, ಹಳೇ ಮೋಕಾ ಸೇತುವೆ, ಬ್ಯಾಲಚಿಂತ ಸೇತುವೆ, ಸಿಂಧವಾಳ ಕ್ರಾಸ್, ಮೋಕಾ ಬಳಿ ಎಲ್ಎಲ್ಸಿ ಕಾಲುವೆ, ಪಿ.ಕೆ.ಶೆಟ್ಟಿ ಕೆರೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.