ಅರಸೀಕೆರೆ: ಜೈಲುಗಳಲ್ಲಿ ಸ್ವಚ್ಛತೆ ಹಾಗೂ ಸ್ಥಳಾವಕಾಶದ ಕೊರತೆ ಇದ್ದು, ಇನ್ನೂ ಬಹಳಷ್ಟು ಜೈಲುಗಳ ವಿಸ್ತರಣೆ ಆಗಬೇಕಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಬಂಧೀಖಾನೆ ಸಚಿವ ಎ. ನಾರಾಯಣ ಸ್ವಾಮಿ ಶುಕ್ರವಾರ ತಿಳಿಸಿದರು.ಪಟ್ಟಣದ ಉಪ ಬಂಧೀಖಾನೆಗೆ ಭೇಟಿ ನೀಡಿ ಬಂಧಿಖಾನೆಗಳ ಅಡುಗೆ ಮಾಡುವ ಕೋಣೆ ಹಾಗೂ ಸ್ನಾನದ ಕೊಠಡಿ, ಶೌಚಾಲಯ ವೀಕ್ಷಿಸಿದ ನಂತರ ಮಾತನಾಡಿದರು.
ಶುಚಿತ್ವ ಮತ್ತು ಕೈದಿಗಳ ಆರೋಗ್ಯದತ್ತ ಗಮನ ಹರಿಸುವಂತೆ ಉಪ ಅಧೀಕ್ಷಕರಿಗೆ ಸೂಚಿಸಿದರು. ಎರಡು ಕೊಠಡಿಗಳು ಮಾತ್ರ ಇದ್ದು 8ರಿಂದ 12 ಮಂದಿ ಇರಬಹುದು. ಆದರೆ, ಪ್ರಸ್ತುತ 26 ಮಂದಿ ಕೈದಿಗಳಿದ್ದಾರೆ. ಕೆಲವೊಮ್ಮೆ ಈ ಸಂಖ್ಯೆ 50ನ್ನು ದಾಟುತ್ತದೆ ಎಂದು ಅಧಿಕಾರಿಗಳು ಹೇಳಿದಾಗ ‘ರಾಜ್ಯದ ಬಹುಪಾಲು ಜೈಲುಗಳಲ್ಲಿಯೂ ಇದೇ ಸಮಸ್ಯೆ ಇದೆ. ಜೈಲುಗಳ ವಿಸ್ತರಣೆಗೆ ಹಣಕಾಸಿನ ಆಗತ್ಯವಿದ್ದು ಸಧ್ಯದಲ್ಲಿಯೇ ವ್ಯವಸ್ಥೆ ಮಾಡಲಾಗುವುದು’ ಎಂದರು.
ಜೈಲುಗಳಲ್ಲಿ ನಡೆಯುವ ಅಕ್ರಮ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಗತ್ಯವಿರುವ ಕಡೆಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾ ಗುವುದು. ಪಟ್ಟಣದಲ್ಲಿ ಈಗ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಕಟ್ಟಡಗಳ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ದೂರುಗಳು ಬಂದಿವೆ. ಇಂತಹ ವಿಚಾರದಲ್ಲಿ ಅಧಿಕಾರಿಗಳು ಖುದ್ದು ಪರಿಶೀಲಿಸಿ ಉತ್ತಮ ಗುಣ ಮಟ್ಟದ ಕಾಮಗಾರಿ ಮಾಡಿಸಬೇಕು ಎಂದು ತಾಕೀತು ಮಾಡಿದರು.
ತಿಪಟೂರು ಶಾಸಕ ಬಿ.ಸಿ. ನಾಗೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಮನೋಜ್ಕುಮಾರ್, ನಗರ ಘಟಕದ ಅಧ್ಯಕ್ಷ ವೈ.ಕೆ. ದೇವರಾಜ್, ಉಪಾಧ್ಯಕ್ಷ ಭೈರೇಶ್ ಉಪಸ್ಥಿತರಿದ್ದರು.
ರೈತರ ಪರ ಬಜೆಟ್: ಫೆ 24 ರಂದು ಮಂಡಿಸಲಿರುವ ರಾಜ್ಯ ಬಜೆಟ್ ರೈತರು, ಪರಿಶಿಷ್ಟಜಾತಿ ಹಾಗೂ ದುರ್ಬಲ ವರ್ಗದವರ ಪರವಾಗಿರುವ ಬಜೆಟ್ ಎಂದು ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ದೃಷ್ಟಿಯಿಂದ ಕೇಂದ್ರಕ್ಕೆ ಮುನ್ನವೇ ಬಜೆಟ್ ಮಂಡಿಸುತ್ತಿಲ್ಲ. ರಾಜ್ಯದ ಹೆಚ್ಚಿನ ಅಭಿವೃದ್ಧಿ ದೃಷ್ಟಿಯಿಂದ ಮುಂಚಿತವಾಗಿ ಬಜೆಟ್ ಮಂಡಿಸ ಲಾಗುತ್ತಿದೆಯೇ ಹೊರತು ಬೇರೇನೂ ಅರ್ಥ ಕಲ್ಪಿಸಬಾರದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.