ಧಾರವಾಡ: ‘ಕೈಮಗ್ಗದ ಬದಲಿಗೆ ವಿದ್ಯುತ್ ಮಗ್ಗಗಳನ್ನು ಅಳವಡಿಸುವ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕು ಮತ್ತು ಕೈಮಗ್ಗ ಉತ್ಪನ್ನ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಇದೇ 15ರಿಂದ ಪಾದಯಾತ್ರೆ ನಡೆಸಲಾಗುವುದು’ ಎಂದು ಎಂದು ದೇಸಿ ಹಾಗೂ ಚರಕ ಸಂಸ್ಥೆಯ ಮುಖಂಡ, ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದರು.
‘ಜ 15ರಂದು ಗದಗ ಜಿಲ್ಲೆಯ ಗಜೇಂದ್ರಗಡದಿಂದ ಆರಂಭವಾಗುವ ಪಾದಯಾತ್ರೆ ಗದಗ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕೆರೂರು ಗ್ರಾಮದಲ್ಲಿ 28ರಂದು ಅಂತ್ಯಗೊಳ್ಳಲಿದೆ. ಮೂರನೇ ಹಂತದ ಹೋರಾಟದ ಅಂಗವಾಗಿ 30ರಿಂದ (ಗಾಂಧೀಜಿ ಹುತಾತ್ಮ ದಿನ) ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡಿನ ಶ್ರಮಜೀವಿ ಆಶ್ರಮದಲ್ಲಿ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇನೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಕೈಮಗ್ಗ ಯಾಂತ್ರೀಕರಣ ಪ್ರಕ್ರಿಯೆ ವಿರೋಧಿಸಿ ಸತ್ಯಾಗ್ರಹ ನಡೆಯಲಿದೆ. ಹತ್ತಿ ನೇಕಾರರು, ರೇಷ್ಮೆ ನೇಕಾರರು, ಖಾದಿ ನೇಕಾರರು ಹಾಗೂ ವಿದ್ಯುತ್ ಮಗ್ಗಗಳ ಕಾರ್ಮಿಕರ ಜಂಟಿ ಸತ್ಯಾಗ್ರಹ ಇದಾಗಿದೆ. ಹತ್ತಿ ಬೆಳೆಗಾರರು, ಕುರಿ ಸಾಕುವವರು, ರೇಷ್ಮೆ ಬೆಳೆಗಾರರು, ಖಾದಿ ನೂಲು ತೆಗೆಯುವ ಗ್ರಾಮೀಣ ಮಹಿಳೆಯರು, ಬಣ್ಣ ಹಾಕುವವರ ಪರವಾಗಿಯೂ ಧ್ವನಿ ಎತ್ತಲಿದ್ದೇವೆ.
ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ತಪ್ಪಾಗಿ ಅಳವಡಿಸಲಾಗಿರುವ ವಿದ್ಯುತ್ ಮಗ್ಗಗಳಿಂದಾಗಿ ಕಾರ್ಮಿಕರು ಬೀದಿಪಾಲಾಗುವುದನ್ನು ತಪ್ಪಿಸಬೇಕು. ನನೆಗುದಿಗೆ ಬಿದ್ದಿರುವ ವಿವಿಧ ಕೈಮಗ್ಗ ಯೋಜನೆಗಳು ಗ್ರಾಮೀಣ ಫಲಾನುಭವಿಗಳನ್ನು ತಲುಪು ವಂತೆ ಮಾಡಲು ಸರ್ಕಾರಿ ವ್ಯವಸ್ಥೆಯನ್ನು ಚುರುಕುಗೊಳಿಸಬೇಕು’ ಎಂದು ಪ್ರಸನ್ನ ಒತ್ತಾಯಿಸಿದರು.
‘ಆಯಾ ಗ್ರಾಮ ಅಥವಾ ಪಟ್ಟಣಗಳಲ್ಲಿ ನೇಕಾರರು ಸತ್ಯಾಗ್ರಹ ನಡೆಸಲಿದ್ದಾರೆ’ ಎಂದೂ ಅವರು ಹೇಳಿದರು.