ಕೊರಟಗೆರೆ ತಾಲ್ಲೂಕಿನ 50–60 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದು ರಾಜಕೀಯ ದಿವಾಳಿತನ ತೋರಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ ಭಾನುವಾರ ಆರೋಪಿಸಿದರು.
2ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಘಟಾನುಘಟಿ ನಾಯಕರು ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದರು. ಆದರೆ ಯಾರೂ ಕೂಡ ಈ ಭಾಗದ ಜನರ ಸಮಸ್ಯೆಗಳತ್ತ ಗಮನ ಹರಿಸಲಿಲ್ಲ. ಉತ್ತರ ಕರ್ನಾಟಕಕ್ಕಿಂತ ಕೊರಟಗೆರೆ ಕ್ಷೇತ್ರವೇ ಹೆಚ್ಚು ಹಿಂದುಳಿದಿದೆ ಎಂದು ದೂರಿದರು.
ಯುವಜನತೆ ಉದ್ಯೋಗ ಹರಸಿ ವಲಸೆ ಹೊಗುತ್ತಿದ್ದರೂ ಮೂಲಭೂತ ಸೌಕರ್ಯ ಕಲ್ಪಿಸುವ ಪ್ರಯತ್ನ ನಡೆದಿಲ್ಲ. ಕೇಂದ್ರ. ರಾಜ್ಯ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಯನ್ನು ಪರಭಾರೆ ಮಾಡುತ್ತಿವೆ. ಇದರ ವಿರುದ್ಧ ಡಿವೈಎಫ್ಐ ಹೋರಾಟ ರೂಪಿಸಲಿದೆ ಎಂದರು.
ವಕೀಲ ಎಂ.ನಾರಾಯಣ್ ಮಾತನಾಡಿ, ದೇಶದ ಜನಸಂಖ್ಯೆಯ ಅರ್ಧದಷ್ಟು ಯುವಜನರನ್ನು ಸರ್ಕಾರಗಳು ವೋಟ್ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿವೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ರಾಘವೇಂದ್ರ, ಕಾರ್ಯದರ್ಶಿ ಆದಿಮೂರ್ತಿ, ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮೀ, ಜಿಲ್ಲಾಧ್ಯಕ್ಷ ಎಂ.ಆರ್.ನಾಗರಾಜು ಉಪಸ್ಥಿತರಿದ್ದರು.