ಆನೇಕಲ್: `ಗ್ರಾಮೀಣ ಜನತೆಯ ಹಿತವನ್ನು ಕಡೆಗಣಿಸಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವ ಸಲುವಾಗಿ ಬಿಬಿಎಂಪಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗ್ರಾಮಾಂತರ ಪ್ರದೇಶದತ್ತ ಕಸವನ್ನು ವಿಲೇವಾರಿ ಮಾಡಲು ಮುಂದಾಗುತ್ತಿದ್ದಾರೆ' ಎಂದು ಬಿಎಸ್ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಗಣಿ ಶಂಕರ್ ಆರೋಪಿಸಿದರು.
ಬಿಬಿಎಂಪಿ ತಾಲ್ಲೂಕಿನ ಚಿಕ್ಕನಾಗಮಂಗಲದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 7ರ ವೀರಸಂದ್ರ ಗೇಟ್ ಬಳಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಸಾರ್ವಜನಿಕರು ನಡೆಸುತ್ತಿದ್ದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಬೆಂಗಳೂರಿನ ಕಸವನ್ನು ಇಲ್ಲಿ ಸುರಿಯುವ ಮೂಲಕ ಹೊರವಲಯದ ಜನತೆಯ ಆರೋಗ್ಯ ಹಾಳು ಮಾಡಲು ಮುಂದಾಗಿದ್ದಾರೆ. ವಿದೇಶ ಪ್ರವಾಸ ಮಾಡಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಬಿಬಿಎಂಪಿ ಸದಸ್ಯರು ಕಸ ವಿಲೇವಾರಿ ಮಾಡಲು ಮಾತ್ರ ವೈಜ್ಞಾನಿಕ ಕ್ರಮವನ್ನು ಹಾಗೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ' ಎಂದು ಕಿಡಿಕಾರಿದರು.
`ಕೈಗಾರಿಕೆಗಳು, ಗೃಹ ಮಂಡಳಿ ಮತ್ತಿತರ ಯೋಜನೆಗಳಿಗಾಗಿ ತಾಲ್ಲೂಕಿನ ಸಾವಿರಾರು ಎಕರೆ ಕೃಷಿಭೂಮಿಯನ್ನು ವಶಪಡಿಸಿಕೊಂಡಿರುವ ಸರ್ಕಾರ ಉಳಿದಿರುವ ಸ್ವಲ್ಪವೇ ಜಮೀನುಗಳನ್ನು ತಿಪ್ಪೆ ಗುಂಡಿಗಳಾನ್ನಾಗಿ ಮಾಡಲು ಹೊರಟಿದೆ. ಬಿಬಿಎಂಪಿ ಚಿಕ್ಕನಾಗಮಂಗಲ ಬಳಿ ಕಸ ವಿಲೇವಾರಿಗೆ ಮುಂದಾಗಿರುವುದು ಖಂಡನೀಯ' ಎಂದರು.
ಡಿಎಸ್ಎಸ್ನ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಗೋವಿಂದರಾಜು, ಬೆಳ್ಳಂಡೂರು ಮುನಿಯಲ್ಲಪ್ಪ, ಶಾಂತಿಪುರ ಗ್ರಾಮ ಪಂಚಾಯ್ತಿ ಸದಸ್ಯ ರಮೇಶ್, ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಕಲ್ಲಹಳ್ಳಿ ಶ್ರೆನಿವಾಸ್, ಮುಖಂಡರಾದ ರುಕ್ಮಿನಿ ಆಂಜಿನಪ್ಪ, ವನಿತಾವೆಂಕಟಸ್ವಾಮಿ, ಚಿಕ್ಕಹಾಗಡೆ ಯಲ್ಲಪ್ಪ, ವೆಂಕಿ ಇತರರು ಇದ್ದರು.