ಅಹಮದಾಬಾದ್(ಪಿಟಿಐ): ಕೋಮು ಹಿಂಸಾಚಾರ ಮಸೂದೆ ಮಂಡನೆಯ ಸಂದರ್ಭವನ್ನು ಪ್ರಶ್ನಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಉದ್ದೇಶಿತ ಮಸೂದೆ ‘ದುರಂತಕ್ಕೆ ಸಲಹೆ’ ಎಂದು ಟೀಕಿಸಿದ್ದಾರೆ. ಅಲ್ಲದೇ ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಗಳಿದ್ದು, ಅಧಿವೇಶನ ಆರಂಭವಾಗುವ ದಿನವೇ ಮೋದಿ ಪತ್ರ ಬರೆದಿದ್ದಾರೆ.
ಈ ಮಸೂದೆ ರಾಜ್ಯಗಳ ಅಧಿಕಾರವನ್ನು ಅತಿಕ್ರಮಿಸುವ ಪ್ರಯತ್ನವಾಗಿದೆ ಎಂದು ಜರಿದಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ, ಈ ಬಗ್ಗೆ ಮುಂದುವರಿಯುವ ಮುನ್ನ ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು, ಪೊಲೀಸ್ ಹಾಗೂ ಭದ್ರತಾ ಪಡೆಗಳಂತಹ ಸಂಬಂಧಪಟ್ಟ ಹಲವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸುವಂತೆ ಒತ್ತಾಯಿಸಿದ್ದಾರೆ.
‘ಕೋಮು ಹಿಂಸಾಚಾರ ಮಸೂದೆಯು ತಪ್ಪು ಪರಿಕಲ್ಪನೆ, ದುರ್ಬಲ ಕರಡು ಹಾಗೂ ದುರಂತಕ್ಕೆ ಕಾರಣವಾಗಬಲ್ಲ ಸಲಹೆ’ ಎಂದು ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಮೋದಿ ಟೀಕಿಸಿದ್ದಾರೆ.
ಅಲ್ಲದೇ, ‘ಮಸೂದೆ ಮಂಡಿಸುತ್ತಿರುವ ಸಂದರ್ಭದ ಹಿಂದೆ ನೈಜ ಉದ್ದೇಶಕ್ಕಿಂತ ಹೆಚ್ಚಾಗಿ ರಾಜಕೀಯ ಹಿತಾಸಕ್ತಿ ಹಾಗೂ ಮತ ಬ್ಯಾಂಕ್ ರಾಜಕೀಯದ ಸಂಶಯ ಮೂಡಿಸಿದೆ’ ಎಂದು ತಿಳಿಸಿದ್ದಾರೆ.