ಚಿಟಗುಪ್ಪಾ: ಕ್ರೀಡೆಯಿಂದ ಸಮಾಜದಲ್ಲಿ ಭಾವೈಕ್ಯತೆ ಮೂಡುತ್ತದೆ, ಯುವ ಜನಾಂಗದಲ್ಲಿ ಶಿಸ್ತು ಸಂಯಮ, ಶಾಂತಿ ಗುಣಗಳು ಬೆಳೆಯುತ್ತವೆ ಎಂದು ಕೊಕ್ಕೊ, ಥ್ರೋ ಬಾಲ್ ಅಸೋಸಿಯೆಷನ್ ಜಿಲ್ಲಾ ಅಧ್ಯಕ್ಷ ರಾಯ ಬಸವಂತರಾಯ ದೇಶಮುಖ ಹೇಳಿದ್ದಾರೆ.
ಗುರುವಾರ ಪಟ್ಟಣದಲ್ಲಿ ನಡೆದ ಗುಲ್ಬರ್ಗ ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ ಪುರುಷ ಹಾಗೂ ಮಹಿಳೆಯರ ಅಡ್ಡ ರಸ್ತೆ ಓಟ ಸ್ಪರ್ಧೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರೌಢ ಶಾಲಾ ಹಂತದಿಂದ ವಿದ್ಯಾರ್ಥಿಗಳಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ಕೊಟ್ಟು, ಅವರಲ್ಲಿಯ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ದೈಹಿಕ ಶಿಕ್ಷಕರು ಮಾಡಬೇಕು ಎಂದು ನುಡಿದರು.
ಪುರಸಭೆ ಸದಸ್ಯ ಮಲ್ಲಿಕಾಜುರ್ನ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಕ್ರೀಡಾಕೂಟ ನಡೆಸುತ್ತಿರುವುದರಿಂದ ಗ್ರಾಮೀಣ ಕ್ರೀಡಾ ಪಟುಗಳಿಗೆ ಸ್ಫೂರ್ತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಡಾ.ಸತೀಶ್ ಕುಮಾರ ಡೊಂಗರೆ ಪ್ರಾಸ್ತಾವಿಕ ಮಾತನಾಡಿ, ಹೈದರಾಬಾದ್ ಕರ್ನಾಟಕದ ಐದು ಜಿಲ್ಲೆಗಳ 23 ಮಹಾವಿದ್ಯಾಲಯಗಳಿಂದ 50 ಕ್ರೀಡಾ ಪಟುಗಳು ಅಡ್ಡ ರಸ್ತೆ ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಆರು ಜನ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.
ಉದ್ಯಮಿ ಸಂಗಣ್ಣ ಪಾರಾ, ಸುಭಾಷ ಕುಂಬಾರ್ ವೇದಿಕೆಯಲ್ಲಿದ್ದರು.
ಪುರಸಭೆ ಸದಸ್ಯರಾದ ಮುಜಾಫರ್ ಪಟೇಲ್, ಕ್ರಿಸ್ತಾನಂದ, ಗಣ್ಯರಾದ ರೇವಣಪ್ಪ ಹೂಗಾರ, ವಿಠಲರಾವ ಪಟ್ಟಣಕರ್,ಬಸವರಾಜ್ ಪಾಟೀಲ್, ಇಸ್ಮಾಯಲ್ ರಾಠೋಡಿ, ಲಕ್ಷ್ಮಣರಾವ ರಟಕಲ್, ಪ್ರಕಾಶ ತೆಲಂಗ್, ಹಬೀಬ ಶಾನುಲ್ ಹಕ್, ರಾಜು ಘಂಟೋಜಿ, ಇದ್ದರು. ಪ್ರಾಚಾರ್ಯ ರಾಜಕುಮಾರ ಅಲ್ಲೂರೆ ಅಧ್ಯಕ್ಷತೆ ವಹಿಸಿದ್ದರು, ಡಾ.ಜಯದೇವಿ ಗಾಯಕವಾಡ ನಿರೂಪಿಸಿದರು. ಶ್ರವಣಕುಮಾರಿ ಬಿರಾದಾರ ವಂದಿಸಿದರು.
ವಿಜೇತ ಕ್ರೀಡಾ ಪಟುಗಳು: 12.5 ಕಿ.ಮೀ ಅಡ್ಡ ರಸ್ತೆ ಓಟ ಸ್ಪರ್ಧೆ ಪುರುಷ ವಿಭಾಗದಲ್ಲಿ ವಿಜೇತರು: ಬಸವರಾಜ್ ಹನುಮಂತ, ವಿ.ಸಿ.ಬಿ ಪ್ರಥಮ ದರ್ಜೆ ಕಾಲೇಜ್ ಲಿಂಗಸೂಗುರು (ಪ್ರಥಮ), ಈರೇಶ್, ಎಲ್.ವಿ.ಡಿ ಪ್ರಥಮ ದರ್ಜೆ ಕಾಲೇಜ್ ರಾಯಚೂರು (ದ್ವಿತೀಯ), ನಾಗರಾಜ್.ಬಿ, ಸ.ಪ್ರ.ದರ್ಜೆ ಕಾಲೇಜ್, ಸುರಪುರ (ತೃತಿಯ),
ಮಹಿಳಾ ವಿಭಾಗ: ಲತಾ, ಸ.ಪ್ರಥಮ ದರ್ಜೆ ಕಾಲೇಜ್ ಭಾಲ್ಕಿ (ಪ್ರಥಮ), ಮಾಲಾಶ್ರೀ, ಸ.ಪ್ರ.ದರ್ಜೆ ಕಾಲೇಜ್, ಭಾಲ್ಕಿ (ದ್ವಿತೀಯ), ವಿಜಯಲಕ್ಷ್ಮಿ, ಸ.ಪ್ರ.ದರ್ಜೆ ಕಾಲೇಜ್,ಚಿಟಗುಪ್ಪಾ (ತೃತಿಯ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.