ಹುಬ್ಬಳ್ಳಿ: ವರ್ತಕರು ತಮ್ಮ ವಹಿ ವಾಟಿನ ಲೆಕ್ಕಪತ್ರಗಳ ದಾಖಲಾತಿಗೆ ಬಳ ಸುವ ಖಾತೆ ಕಿರ್ದಿಗಳ (ಲೆಡ್ಜರ್) ಮಾರಾಟ ನಗರದಲ್ಲಿ ಶುರುವಾಗಿದೆ. ದೀಪಾವಳಿ ಹಬ್ಬ ಇನ್ನೊಂದು ವಾರ ಬಾಕಿಯಿರುವಾಗಲೇ ಅವುಗಳ ಮಾರಾಟ ಆರಂಭವಾಗಿ ಬಲಿಪಾಡ್ಯಮಿ ದಿನ (ಅ. 27) ಅಂತ್ಯವಾಗಲಿದೆ.
ಸಣ್ಣ ವ್ಯಾಪಾರಸ್ಥರು ಹಾಗೂ ಗ್ರಾಮೀಣ ಪ್ರದೇಶದ ವ್ಯಾಪಾರಸ್ಥರು ಈಗಲೂ ಇವುಗಳನ್ನೇ ಬಳಸುತ್ತಾರೆ. ಬಲಿಪಾಡ್ಯಮಿ ದಿನ ಈ ಲೆಡ್ಜರ್ಗಳನ್ನು ಬದಲಾಯಿಸುತ್ತಾರೆ. ಅನೇಕರು ದೀಪಾವಳಿಗೆ ಖರೀದಿಸಿ ಯುಗಾದಿಗೆ ಬದಲಾಯಿಸುತ್ತಾರೆ. ಇದನ್ನು ರೋಜ್ ಮೇಳ ಎಂದೂ ಕ್ಯಾಶ್ ಬುಕ್ ಎಂದೂ ಕರೆಯುತ್ತಾರೆ. ಕೆಂಪು ಬಟ್ಟೆ ಪೂಜೆಗೆ ಶ್ರೇಷ್ಠ ಎನ್ನುವ ಕಾರಣಕ್ಕೆ ಕೆಂಪು ಬಟ್ಟೆಯಿಂದ ಬೈಂಡಿಂಗ್ ಮಾಡಿದ ವುಗಳನ್ನು ಲೆಕ್ಕಪತ್ರಕ್ಕೆ ಬಳಸುತ್ತಾರೆ.
ಗಮನಾರ್ಹ ಸಂಗತಿ ಎಂದರೆ, ಅವು ಗಳಲ್ಲಿ ಕನ್ನಡ ಅಂಕಿಗಳನ್ನು ಮುದ್ರಿಸ ಲಾಗುತ್ತದೆ ಜೊತೆಗೆ ಲೆಕ್ಕಪತ್ರ ಬರೆ ಯುವವರು ಕೂಡಾ ಕನ್ನಡ ಅಂಕಿ ಗಳಲ್ಲೇ ಬರೆಯುತ್ತಾರೆ. ಅಲ್ಲದೇ ಟೇಬಲ್ ಹಾಗೂ ಕುರ್ಚಿ ಬಳಸದೆ ದಿಂಬು ಹಾಗೂ ಗಾದಿ ಬಳಸಿ ಬರೆಯುತ್ತಾರೆ. ಇದರೊಂದಿಗೆ ಲೆಕ್ಕಪತ್ರ ಬರೆಯುವ ಮುನ್ನ ಹಣತೆಯ ದೀಪ ಹಚ್ಚಿಯೇ ಬರೆಯುತ್ತಾರೆ. ವಿದ್ಯುತ್ ಕೈಕೊಟ್ಟರೂ ಹಣತೆ ದೀಪ ಇರುತ್ತದೆ ಎನ್ನುವ ಕಾರಣದ ಜೊತೆಗೆ ದೀಪ ಹಚ್ಚಿಟ್ಟು ಬರೆಯುವುದು ಶುಭ ಲಕ್ಷಣ ಎನ್ನುವ ಕಾರಣವೂ ಇದೆ.
`ಇದೇ 24ರಂದು ಧನ್ ತ್ರಯೋದಶಿ. ಅಂದು ಖಾತೆ ಕಿರ್ದಿ ಕೊಳ್ಳಲು ವಿಶೇಷ ದಿನ. ಅವತ್ತು ನಗದು, ಚಿನ್ನಾಭರಣ ಹಾಗೂ ಲೆಡ್ಜರ್ಗಳನ್ನು ಇಟ್ಟು ಪೂಜಿಸುವುದು ಸಂಪ್ರ ದಾಯ. ಹಾಗೆ ಮಾಡಿದರೆ ಲಾಭಾಂಶ ಹೆಚ್ಚು ಎನ್ನುವ ನಂಬಿಕೆಯಿಂದ ಹೆಚ್ಚು ವ್ಯಾಪಾರಸ್ಥರು ಕೊಳ್ಳುತ್ತೇವೆ~ ಎನ್ನು ತ್ತಾರೆ ದುರ್ಗದಬೈಲ್ನ ಸಣ್ಣ ವ್ಯಾಪಾರಸ್ಥರಾದ ಅರುಣ್ ಭೂತೆ.
`ಲೆಡ್ಜರ್ಗಳ ಜೊತೆಗೆ ಮಿತಿಗಟ್ಟಿ ಹಾಗೂ ಕ್ಯಾಲೆಂಡರ್ ಕೂಡಾ ಖರೀದಿ ಸುತ್ತಾರೆ. ಇದು ಮಿನಿಪಂಚಾಂಗವಿದ್ದ ಹಾಗೆ. ಆ ದಿನ ಮುಗಿದ ಬಳಿಕ ಹರಿದು ಹಾಕುವ ಪುಟ್ಟ ಕ್ಯಾಲೆಂಡರ್ ಅದು. ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಜಾತ್ರೆ ಯನ್ನು ಮಿತಿಗಟ್ಟಿ ನೆನಪಿಸುತ್ತದೆ. ಕನ್ನಡ ವಲ್ಲದೇ ಮರಾಠಿ, ಹಿಂದಿ ಹಾಗೂ ಇಂಗ್ಲಿಷಿನಲ್ಲೂ ಮಿತಿಗಟ್ಟಿ ಸಿಗುತ್ತವೆ.
ಆದರೆ ದೀಪಾವಳಿ ಮರುದಿನ ಖಾತೆ ಕಿರ್ದಿಗಳನ್ನು ಯಾರೂ ಖರೀದಿಸು ವುದಿಲ್ಲ. ಉಳಿದರೆ ನಷ್ಟ. ಮೊದಲೇ ವ್ಯವಹಾರ ಕಡಿಮೆ. ಲಾಭವೂ ಕಡಿಮೆ~ ಎನ್ನುತ್ತಾರೆ ದುರ್ಗದಬೈಲ್ನಲ್ಲಿ ಅವುಗ ಳನ್ನು ಮಾರುವ ಸಂಗಮೇಶ ಹಂಜಿ.
ಇಳಿದ ಬೇಡಿಕೆ: ಕಂಪ್ಯೂಟರ್ ಬಳಕೆಯಿಂದಾಗಿ ಅವುಗಳ ಬೇಡಿಕೆ ಕಡಿಮೆಯಾಗುತ್ತಿದೆ. ಆಯಾ ದಿನದ ವಹಿವಾಟನ್ನು ಅಂದಂದೇ ಕಂಪ್ಯೂಟರ್ನಲ್ಲಿ ದಾಖಲಿಸುವುದರಿಂದ ಬರೆಯುವ ಶ್ರಮ ಉಳಿತಾಯವಾಗುತ್ತಿದೆ. ಇದ ರಿಂದ ಅವುಗಳನ್ನು ಕೊಳ್ಳುವವರು ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಇವುಗಳ ಮಾರಾಟ ಪ್ರತಿ ವರ್ಷ ಶೇ 15ರಷ್ಟು ಇಳಿಕೆಯಾಗುತ್ತಿದೆ.
ಇದರ ಪರಿಣಾಮ ಅವುಗಳನ್ನು ಮಾರುವ ಅಂಗಡಿಗಳ ಸಂಖ್ಯೆ ನಗರದಲ್ಲಿ ಮೂರಕ್ಕೆ ಇಳಿದಿದೆ. ಗಂಗಪ್ಪ ಮಾಳಗಿ ಯವರ ಮಲ್ಲಿಕಾರ್ಜುನ ಬುಕ್ ಡಿಪೋ, ಈರಣ್ಣ ಹಂಜಿಯವರ ಗಂಗಾಧರ ಬುಕ್ ಡಿಪೋ ಹಾಗೂ ಕುಬಸದ ಗಲ್ಲಿಯ ವಿ.ಪಿ. ಕುಬಸದ ಅವರ ಕುಬಸದ ಪ್ರಿಂಟಿಗ್ ಪ್ರೆಸ್ ಇವೇ ಆ ಮೂರು ಅಂಗಡಿಗಳು.
`45 ವರ್ಷಗಳಿಂದ ಖಾತೆ ಕಿರ್ದಿ ಗಳನ್ನು ತಯಾರಿಸಿ ಮಾರುವುದೇ ಉದ್ಯೋಗವಾಗಿದೆ. ಈಗ ಮಾರಾಟ ಕಡಿಮೆ ಆಗುತ್ತಿರುವುದರಿಂದ ಲಗ್ನಪತ್ರಿಕೆ ಗಳನ್ನು ಪ್ರಿಂಟ್ ಮಾಡುತ್ತಿದ್ದೇವೆ~ ಎನ್ನು ತ್ತಾರೆ ಉಮೇಶ ಕುಬಸದ.
`ಖಾತೆ ಕಿರ್ದಿ ವ್ಯಾಪಾರವನ್ನು ನಿಲ್ಲಿಸ ಬಹುದಿತ್ತು. ಆದರೆ ಬಹಳ ವರ್ಷ ಗಳಿಂದ ವ್ಯಾಪಾರವನ್ನು ಉಳಿಸಿಕೊಂಡು ಬಂದಿದ್ದೇವೆ. ಪುತ್ರರಾದ ಸಂಗಮೇಶ ಹಾಗೂ ವಿನಾಯಕನನ್ನು ಇದೇ ವೃತ್ತಿಯಲ್ಲಿ ತೊಡಗಿಸಿದ್ದೇನೆ. ಅವುಗಳ ಜೊತೆಗೆ ನೋಟುಪುಸ್ತಕ, ಪೆನ್ನು ಮೊದಲಾದ ಸ್ಟೇಷನರಿ ವಸ್ತುಗಳನ್ನೂ ಮಾರುತ್ತಿದ್ದೇವೆ~ ಎನ್ನುತ್ತಾರೆ ಈರಣ್ಣ ಹಂಜಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.