ಕೋಲ್ಕತ್ತ (ಐಎಎನ್ಎಸ್): ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಪ್ರತಿನಿಧಿ ಮಾಜಿ ಕ್ರಿಕೆಟಿಗ ಗಂಗೂಲಿ, ಆಡಳಿತಾರೂಢ ಸಿಪಿಎಂ ಜತೆ ನಂಟು ಹೊಂದಿದ ಬಗ್ಗೆ ಪ್ರಮುಖ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಗಂಗೂಲಿ ಅವರು ಸಿಪಿಎಂ ಜತೆ ನಂಟು ಹೊಂದಿದ್ದಾರೆ. ಇದು ಚುನಾವಣೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಬುಧವಾರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಆರೋಪಿಸಿದೆ.
ದೂರಿನ ಜತೆಗೆ ಸಚಿವ ಅಶೋಕ್ ಭಟ್ಟಾಚಾರ್ಯ ಮತ್ತು ಗಂಗೂಲಿ ನಡುವಿನ ಮಾತುಕತೆ ವಿವರಗಳನ್ನು ಒಳಗೊಂಡ ಸಿಡಿಯನ್ನು ಲಗತ್ತಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಎನ್.ಕೆ.ಸಹನ ತಿಳಿಸಿದ್ದಾರೆ.
ಸಿಡಿಯನ್ನು ಪರಿಶೀಲಿಸಿ ಅದರಲ್ಲಿನ ವಿವರಗಳನ್ನು ನವದೆಹಲಿಯಲ್ಲಿನ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಗುರುವಾರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮತದಾನದ ಹಕ್ಕಿನ ಮಹತ್ವ ಮತ್ತು ಜನರಲ್ಲಿ ಮತದಾನಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ತಾಳವಾದ್ಯ ಬಾರಿಸುವ ವಿಕ್ರಮ್ ಘೋಷ್ ಅವರನ್ನು ಪ್ರತಿನಿಧಿಗಳನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿತ್ತು. ಪ್ರತಿನಿಧಿಯನ್ನಾಗಿ ಆಯ್ಕೆ ಮಾಡುವ ಮುನ್ನ ಯಾವುದಾದರೊಂದು ಪಕ್ಷಕ್ಕೆ ಪ್ರಚಾರ ಮಾಡುವಿರಾ ಎಂದು ಕೇಳಿದಾಗ ಗಂಗೂಲಿ ಇಲ್ಲ ಎಂದು ಮೌಖಿಕವಾಗಿ ಭರವಸೆ ನೀಡಿದ್ದರು ಎಂದೂ ಸಹನ ತಿಳಿಸಿದ್ದಾರೆ.