ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರ ಸ್ಪರ್ಶಕ್ಕೆ ಜೈಲುಗಳೂ ಮಹಲುಗಳು!

Last Updated 26 ಸೆಪ್ಟೆಂಬರ್ 2011, 10:55 IST
ಅಕ್ಷರ ಗಾತ್ರ

ದಾವಣಗೆರೆ: ಜನರಲ್ಲಿನ ಹಣ ಹಾಗೂ ಅಧಿಕಾರದ ಮೋಹ ಇದೇ ರೀತಿ ಮುಂದುವರಿದರೆ ದೇಶದ ಎಲ್ಲ ಜೈಲುಗಳು ಭರ್ತಿಯಾಗಲಿದ್ದು, ಜೈಲುಗಳು ಗಣ್ಯರ ಸಂಖ್ಯೆಯ ಹೆಚ್ಚಳದಿಂದ ಮಹಲುಗಳಾಗಿ ಪರಿವರ್ತಿತವಾಗಲಿವೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಭವಿಷ್ಯ ನುಡಿದರು.

ಶಿವಯೋಗಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 55ನೇ ವರ್ಷದ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಣ, ಅಧಿಕಾರಕ್ಕಾಗಿ ಒಳ್ಳೆಯ ತನವನ್ನು ಕಳೆದುಕೊಳ್ಳಲು ಜನರು ಸಿದ್ಧರಿದ್ದಾರೆ. ಶ್ರಮವಿಲ್ಲದೇ ಬರುವ ಅಂತಹ ಹಣ ಹಾಗೂ ಅಧಿಕಾರ ಎಷ್ಟು ದಿನ ಇರುತ್ತದೆ ಎನ್ನುವ ಬಗ್ಗೆ ಚಿಂತನೆ ನಡೆಸುವುದಿಲ್ಲ. ದುರಾಸೆಯ ಮನೋಭಾವನೆಯನ್ನು ತೊರೆಯದೇ ಹೋದರೆ ಮುಂದೆ ಬಹಳಷ್ಟು ಜನ ದುಃಖ ಅನುಭವಿಸುತ್ತಾರೆ. ಅವರು ಗಳಿಸಿದ ಹಣ, ಆಸ್ತಿ ಸಿಬಿಐ, ಲೋಕಾಯುಕ್ತರ ಪಾಲಾಗಲಿವೆ ಎಂದು ಇಂದಿನ ರಾಜಕೀಯ ಘಟನೆಗಳ ಕುರಿತು ವಿಷಾದ ವ್ಯಕ್ತಪಡಿಸಿದರು.

ದುಷ್ಟತನದ ಜತೆಗೆ ಸಾಗುವವರು ಎಂದಿಗೂ ಒಳ್ಳೆಯವರಾಗಲು ಸಾಧ್ಯ ಇಲ್ಲ. ಸಾತ್ವಿಕ ಜೀವನ, ಒಳ್ಳೆಯ ತನದ ಜತೆಗೆ ಸಾಗುವ ನಿರಂತರ ಪ್ರಯತ್ನ ಮಾಡಬೇಕು. ಬುದ್ಧ, ಬಸವಣ್ಣ, ಜಯದೇವ ಗುರುಗಳು ಅಂತಹ ಹಾದಿಯಲ್ಲಿ ನಡೆದ ಪರಿಣಾಮ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿಶ್ಲೇಷಿಸಿದರು.

ಪ್ರಬುದ್ಧರ ಜತೆಗಿನ ಒಡನಾಟ ಎಲ್ಲರನ್ನೂ ಒಳ್ಳೆಯ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ. 12ನೇ ಶತಮಾನದ ಶರಣರು ಅದಕ್ಕೆ ಒಳ್ಳೆಯ ಉದಾಹರಣೆ. ಅನುಭವ ಮಂಟಪ ಎಂಬ ಶಾಲೆ ಕಟ್ಟಿಕೊಂಡು ಎಲ್ಲರನ್ನೂ ಒಳ್ಳೆಯ ಹಾದಿಯಲ್ಲಿ ನಡೆಸಿದರು. ಸಮಾಜ ಎಂಬ ಶಾಲೆಯಲ್ಲಿ ಒಳ್ಳೆಯ ಭಾವನೆಗಳೊಂದಿಗೆ ಸಾಗಿದಾಗ ಮಾತ್ರ ದೊಡ್ಡವರು ಎನ್ನಿಸಿಕೊಳ್ಳಲು ಸಾಧ್ಯ ಎಂದರು.

ಮುರುಘರಾಜೇಂದ್ರ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಜಯದೇವ ಜಗದ್ಗುರುಗಳ ಭಾವಚಿತ್ರ ಹಾಗೂ ಧರ್ಮಗ್ರಂಥದ ಉತ್ಸವ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಧಾರವಾಡದ ಹಿಂದೂಸ್ತಾನಿ ಗಾಯಕಿ ಜಯದೇವಿ ಜಂಗಮಶೆಟ್ಟಿ ಹಾಗೂ ಸಂಗಡಿಗರು ವಚನ ಗೀತೆ ಹಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT