ಬೆಳಗಾವಿ: ಕನ್ನಡದ ಕಾವ್ಯಗಳನ್ನು ಗಮಕವಾಚನದ ಮೂಲಕ ತಿಳಿಸಿ ಕೊಟ್ಟಾಗ ಅದು ಮತ್ತಷ್ಟು ಹತ್ತಿರ ವಾಗುತ್ತದೆ. ಅಂತಹ ಕಾವ್ಯಗಳನ್ನು ಜನರಿಗೆ ಪರಿಚಯ ಮಾಡಿಕೊಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಬನಾರಸ್ ವಿವಿಯ ನಿವೃತ್ತ ಡೀನ್ ಡಾ. ಆರ್.ಜೆ.ಗಲಗಲಿ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ವತಿ ಯಿಂದ ಕುಮಾರವ್ಯಾಸ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಎಂಶ್ರೀ, ತೀನಂಶ್ರೀ, ಅನಕೃ, ಬೇಂದ್ರೆ ಮೊದಲಾದವರು ಕನ್ನಡ ಸಾಹಿತ್ಯದ ಅಭಿಮಾನವನ್ನು ಗಮಕ ಸಾಹಿತ್ಯದ ಮೂಲಕ ಜನಪ್ರಿಯ ಹಾಗೂ ಜಾಗೃತಗೊಳಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಜಿನದತ್ತ ದೇಸಾಯಿ ಅವರು, ಜನರ ಅಭಿರುಚಿಯನ್ನು ಶುಚಿಗೊಳಿಸುವ ಕೆಲಸ ನಡೆಯಬೇಕಾಗಿದ್ದು, ಕಾವ್ಯವಾಚನ ಕಾರ್ಯಕ್ರಮಗಳು ಮತ್ತೆ, ಮತ್ತೆ ನಡೆಯಬೇಕು ಎಂದರು.
ಬಾನುಲಿ ಗಮಕಿ ಎಲ್.ಎಸ್. ಶಾಸ್ತ್ರೀ ಅವರು, ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯ ಆಯ್ದ ಪದ್ಯಗಳನ್ನು ಹಾಡಿದರು. ಡಾ. ಎಚ್.ಬಿ. ಕೋಲ್ಕಾರ್ ವ್ಯಾಖ್ಯಾನ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಅಧಿಕಾರಿ ಶಶಿಧರ ಭೈರನಟ್ಟಿ, ಕಸಾಪ ಅಧ್ಯಕ್ಷ ಬಸವರಾಜ ಜಗಜಂಪಿ, ಎಂ.ಎಸ್. ಇಂಚಲ, ಎಂ.ಸಿ. ಅಂಟಿನ, ಆಶಾ ಕಡಪಟ್ಟಿ, ಡಿ.ಬಿ. ಪಾಟೀಲ, ಸ.ರಾ. ಸುಳಕೊಡೆ, ಮಧುಕರ ಗುಂಡೇನಟ್ಟಿ ಉಪಸ್ಥಿತರಿದ್ದರು.
ಚುಟುಕು ಸಾಹಿತ್ಯ ಪರಿಷತ್ ಪಿ.ಬಿ. ಸ್ವಾಮಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ನಿಂಗರಾಜು ವಂದಿಸಿದರು.