ಬೆಳಗಾವಿ: ಆಡಳಿತ ಪಕ್ಷದ ನಾಯಕರ ರಾಜೀನಾಮೆಗೆ ಪಟ್ಟು ಹಿಡಿದು ಮೇಜ ಬಡಿದ ಪ್ರತಿಪಕ್ಷದ ನಾಯಕರು... ಜನಪರ ಸಮಸ್ಯೆಗಳ ಪರಿ ಹಾರಕ್ಕಾಗಿ ಪರಸ್ಪರ ವಾಗ್ವಾದ... ಸೈಲೆನ್ಸ್ ಪ್ಲೀಸ್, ಸಿಟ್ ಡೌನ್, ಶಾಂತತೆ ಕಾಪಾಡಿ ಎನ್ನುತ್ತ ಮನ ವೊಲಿಸಲು ಮುಂದಾಗುತ್ತಿದ್ದ ಸಭಾಪತಿಗಳು...
ಪದವಿಪೂರ್ವ ಶಿಕ್ಷಣ ಇಲಾಖೆ, ವೃತ್ತಿ ಶಿಕ್ಷಣ ಇಲಾಖೆ ಹಾಗೂ ಕೆಎಲ್ಇ ಸಂಸ್ಥೆಯ ಜಿ.ಎ. ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯ ದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಆಯೋಜಿ ಸಿದ್ದ ಯುವ ಸಂಸತ್ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಾವಳಿಗಳಿವು.
ರಾಜಕಾರಣಿಗಳ ವೇಷಭೂಷಣದಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು (ಜನಪ್ರತಿ ನಿಧಿಗಳು) ಯುವ ಸಂಸತ್ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಗಮನಸೆಳೆದರು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಆಡಳಿತ ಪಕ್ಷದ ನಾಯಕರ ವಿರುದ್ಧ ವಾಗ್ವಾದ ನಡೆಸಿದರು.
ದಿನ ಪತ್ರಿಕೆಗಳು, ಕಡತಗಳು, ಸಾಕ್ಷ್ಯಗಳನ್ನು ಪ್ರದರ್ಶಿಸಿ ಆಡಳಿತ ಪಕ್ಷದ ನಾಯ ಕರನ್ನು ತರಾಟೆಗೆ ತೆಗೆದುಕೊಂಡರು. ಮೇಜನ್ನು ಗಡಗಡ ಬಡಿದರು. ಇದಕ್ಕೆ ಜಗ್ಗದ ಆಡಳಿತ ಪಕ್ಷದ ನಾಯಕರು ತಮ್ಮದೇನೂ ತಪ್ಪಿಲ್ಲ ಎಂಬುದನ್ನು ಸಾಕ್ಷೀಕರಿಸಿ ಸಮರ್ಥಿಸಿಕೊಂಡರು.
ಯುವ ಸಂಸತ್ ಆರಂಭಕ್ಕೂ ಮುನ್ನ ನೆಲ್ಸನ್ ಮಂಡೇಲಾ, ಶ್ರೀಕಂಠದತ್ತ ಓಡೆಯರ್ ಹಾಗೂ ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಂತಾಪ ಸೂಚಿಸಿ ಮೌನಾಚರಣೆ ಆಚರಿಸಲಾಯಿತು. ಬಳಿಕ ಕೆಲವು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಯುವ ಸಂಸತ್ನಲ್ಲಿ ಧಾರವಾಡ–ಕಿತ್ತೂರ–ಬೆಳಗಾವಿ ನೇರ ರೈಲ್ವೆ ಸಂಪರ್ಕ ಯೋಜನೆ, ದೇವಯಾನಿ ಪ್ರಕರಣ, ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ನಡೆದ ರೈತನ ಆತ್ಮಹತ್ಯೆ, ಶಾಸಕರ ವಿದೇಶ ಪ್ರವಾಸ, ಸಮಗ್ರ ಕುಡಿಯುವ ನೀರಿನ ಯೋಜನೆ, ನದಿಗಳ ಜೋಡಣೆ, ಆಧಾರ್ ಗುರುತಿನ ಚೀಟಿ ಅವಾಂತರ, ಗಡಿಯಲ್ಲಿ ಹೆಚ್ಚುತ್ತಿ ರುವ ದಾಳಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಜಾರಿಗೆ ತಂದಿರುವ ಸಿಸಿಇ ಯೋಜನೆ, ಬರ ಪರಿಹಾರ ಸೇರಿದಂತೆ ವಿವಿಧ ವಿಷಯ ಗಳ ಕುರಿತು ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರ ಸಹಮತದ ಮೇರೆಗೆ ಲೋಕ ಪಾಲ ಮಸೂದೆಯನ್ನು ಅಂಗೀಕರಿಸಲಾ ಯಿತು. ಇದರಲ್ಲಿ ಜಿಲ್ಲೆಯ 35 ಕಾಲೇಜುಗಳ 70 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೈ ಕೊಟ್ಟ ಮೈಕ್, ಚಡಪಡಿಸಿದ ನಾಯಕರು: ಯುವ ಸಂಸತ್ನಲ್ಲಿ ಪದೇ ಪದೇ ಮೈಕ್ ಕೈ ಕೊಟ್ಟಿದ್ದರಿಂದ ಕೆಲ ಸಮಯ ಅಪವ್ಯಯವಾಯಿತು. ಕೆಲವರು ಪ್ರತಿಪಕ್ಷಗಳ ನಾಯಕರ ಪ್ರಶ್ನೆಗಳಿಗೆ ಕೂಡಲೇ ಉತ್ತರಿಸಲು ತಡವರಿಸಿ ನಗೆಪಾಟಲಿಗೆ ಈಡಾದರು.
ವಾಕ್ಚಾತುರ್ಯ, ಸಂವಹನಾ ಕೌಶಲ ಪರೀಕ್ಷಿಸದೇ ಅಂಕಗಳ ಮಾನ ದಂಡ ಅನುಸರಿಸಿ ಯುವ ಸಂಸತ್ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದರಿಂದ ಹೀಗಾಯಿತು ಎಂಬ ಸಿದ್ಧಉತ್ತರ ಅಧಿಕಾರಿ ವಲಯದಿಂದಲೇ ಕೇಳಿ ಬಂತು.
‘ಯುವ ಸಂಸತ್ ಸ್ಪರ್ಧೆ ವಿದ್ಯಾರ್ಥಿ ಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪೂರಕವಾಗಿದೆ. ಇದರಲ್ಲಿ ಭಾಗವಹಿಸಿ ರುವುದು ಖುಷಿ ತಂದಿದೆ. ಇಂತಹ ಸ್ಪರ್ಧೆಗಳನ್ನು ಇನ್ನೂ ಹೆಚ್ಚೆಚ್ಚು ಆಯೋಜಿಸುವ ಮೂಲಕ ಯುವಕ, ಯುವತಿಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಲು ಮುಂದಾಗಬೇಕು’ ಎಂದು ರಕ್ಷಣಾ ಮಂತ್ರಿಯಾಗಿ ಕಾರ್ಯನಿರ್ವ ಹಿಸಿದ ಬೆಳಗಾವಿಯ ಆರ್ಪಿಡಿ ಕಾಲೇಜಿನ ವಿದ್ಯಾರ್ಥಿನಿ ರೇಣುಕಾ ಜೋಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇದಕ್ಕೂ ಮುನ್ನ ಯುವ ಸಂಸತ್ ಸ್ಪರ್ಧೆಯನ್ನು ಉದ್ಘಾಟಿಸಿದ ಸಂಸದ ಸುರೇಶ ಅಂಗಡಿ ಅವರು, ಇಂಥ ಸ್ಪರ್ಧೆ ಗಳಿಂದ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುತ್ತದೆ. ನಾಯಕತ್ವದ ಗುಣಗಳನ್ನು ಸಹ ಬೆಳೆಸಲು ಇದು ಪೂರಕವಾಗಲಿದೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಮುಂದಿನ ವರ್ಷದಿಂದ ಯುವ ಸಂಸತ್ ಸ್ಪರ್ಧೆಯನ್ನು ಸುವರ್ಣ ವಿಧಾನ ಸೌಧದಲ್ಲಿ ನಡೆಸಲು ಪ್ರಯತ್ನಿಸಲಾಗು ವುದು. ವಿದ್ಯಾರ್ಥಿಗಳು ಸಂಸತ್ತಿನ ಬಗ್ಗೆ ಜ್ಞಾನ ಹೊಂದುವುದು ಅವಶ್ಯವಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ವಿಶೇಷ ಕಾರ್ಯದರ್ಶಿ ಬಿ.ವಿ.ಪತ್ತಾರ, ಪಿಯು ಶಿಕ್ಷಣ ಉಪ ನಿರ್ದೇಶಕ ಚಂದ್ರಶೇಖರ ತೊರವಿ, ಅಶೋಕ ಗಣಾಚಾರಿ, ಪ್ರೊ. ದೇಶಪಾಂಡೆ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.