ನವದೆಹಲಿ(ಪಿಟಿಐ): ಕೋಲ್ಕತ್ತದ ಪ್ರಸಿದ್ಧ ಕಾಳಿಘಾಟ್ ದೇವಾಲಯದ ಗರ್ಭಗುಡಿಯೊಳಗೆ ಭಕ್ತರಿಗೆ ಪ್ರವೇಶ ನಿಷೇಧಿಸಿ ಅಲ್ಲಿನ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ.
ಗರ್ಭಗುಡಿಯೊಳಗೆ ಭಕ್ತರ ಪ್ರವೇಶ ನಿಷೇಧದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ದೀಪಕ್ ವರ್ಮಾ ಮತ್ತು ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠ ಈ ಆದೇಶಿಸಿದೆ.
ನಾಲ್ಕು ವಾರದ ಒಳಗಾಗಿ ಈ ಕುರಿತು ವಿವರಣೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ದೇಗುಲದ ಆಡಳಿತ ಮಂಡಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ದೇವಾಲಯದ ಪ್ರಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹೈಕೋರ್ಟ್ ವಿಧಿಸಿದ್ದ ಉಳಿದ ಕಟ್ಟಳೆಗಳನ್ನು ಯಥಾರೀತಿ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಭಕ್ತಿರಿಗೆ ಕಾಳಿ ದೇಗುಲದ ಗರ್ಭಗುಡಿ ಪ್ರವೇಶ ನೀಡದಂತೆ ಹೈಕೋರ್ಟ್ ಏ. 20ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ದೇಗುಲ ಆಡಳಿತ ಮಂಡಳಿ ಸುಪ್ರೀಂ ಮೆಟ್ಟಿಲೇರಿತ್ತು.