ಅಸಾನ್ಸೊಲ್ (ಪಶ್ಚಿಮ ಬಂಗಾಳ) (ಪಿಟಿಐ): ಟಿಕೆಟ್ ಪಡೆಯದೆ ಎಕ್ಸ್ಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ರೈಲು ಬೋಗಿಯ ಪರಿಚಾರಕರೊಬ್ಬರು ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಬರ್ದ್ವಾನ್ ಜಿಲ್ಲೆಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.
ಹಿಮಗಿರಿ ಎಕ್ಸ್ಪ್ರೆಸ್ನ ಹವಾನಿಯಂತ್ರಿತ ಬೋಗಿಯೊಂದರಲ್ಲಿ ಶನಿವಾರ ನಸುಕಿನ 2.30ರಲ್ಲಿ ಈ ಘಟನೆ ನಡೆಯಿತು. ಟಿಕೆಟ್ ಪಡೆಯದಿದ್ದ ಇಬ್ಬರು ಪ್ರಯಾಣಿಕರು ಶುಕ್ರವಾರ ರಾತ್ರಿ ಹೌರಾ ನಿಲ್ದಾಣದಿಂದ ರೈಲನ್ನು ಏರಿದ್ದರು. ರೈಲು ಅಸಾನ್ಸೊಲ್ ನಿಲ್ದಾಣಕ್ಕೆ ತಲುಪುವುದಕ್ಕೆ ಕೆಲವೇ ನಿಮಿಷ ಮೊದಲು ಇವರು ಬೋಗಿಯ ಪರಿಚಾರಕರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಜಗದಾನಂದ ಝಾ ತಿಳಿಸಿದ್ದಾರೆ.
ಮೃತಪಟ್ಟವರು ಸಾಗರ್ ಠಾಕೂರ್ ಎಂಬುವವರು. ತೀವ್ರವಾಗಿ ಗಾಯಗೊಂಡಿರುವ ಗಣೇಶ್ ಶಾ ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದೂ ತಿಳಿಸಿದ್ದಾರೆ.