ನವದೆಹಲಿ (ಪಿಟಿಐ): ಗುಜರಾತ್ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಆರ್.ಎ. ಮೆಹ್ತಾ ಅವರನ್ನು ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಲ್ಲಿನ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆಗೆ ಸ್ವೀಕರಿಸಿದೆ.
ಅರ್ಜಿಯಲ್ಲಿನ ಪ್ರಮುಖ ಪ್ರಶ್ನೆಯಾದ ಲೋಕಾಯುಕ್ತರ ನೇಮಕದಲ್ಲಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಕುರಿತು ಆಳವಾಗಿ ವಿಶ್ಲೇಷಿಸಬೇಕಿದೆ. ಆದ್ದರಿಂದ ಈ ಅರ್ಜಿ ವಿಚಾರಣೆಯನ್ನು ಫೆ. 20ರಿಂದ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಜೆ.ಎಸ್. ಖೇಹರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿದೆ.
ಸರ್ಕಾರದ ಅನುಮೋದನೆ ಪಡೆಯದೆ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಿರುವ ರಾಜ್ಯಪಾಲರ ಕ್ರಮ ಅಸಂವಿಧಾನಿಕ ಎಂಬುದು ಸರ್ಕಾರದ ನಿಲುವು.
ಆದರೆ, ರಾಜ್ಯಪಾಲರ ಕ್ರಮವನ್ನು ಜ.18ರಂದು ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದ ಗುಜರಾತ್ ಹೈಕೋರ್ಟ್; ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಧೋರಣೆಯನ್ನು ಕಟುವಾಗಿ ಟೀಕಿಸಿತ್ತು. `ಈ ವಿಚಾರದಲ್ಲಿ ಹುಡುಗಾಟವಾಡಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಬೇಡಿ~ ಎಂದೂ ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿತ್ತು.
ರಾಜ್ಯಪಾಲರು ಮಾಡಿರುವ ನೇಮಕವನ್ನು ಊರ್ಜಿತಗೊಳಿಸಿರುವ ಹೈಕೋರ್ಟ್ ತೀರ್ಪಿಗೆ ತಡೆ ನೀಡಬೇಕು ಎಂದು ಕೋರಿ ಗುಜರಾತ್ ಸರ್ಕಾರ ಜ. 19ರಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.